ಬ್ರಿಟಿಷರ ಬಂದೂಕಿನ ಎದುರು ಬಿಲ್ಲು-ಬಾಣ ಪ್ರಯೋಗಿಸಿ ನಿರ್ದಿಷ್ಟ ಪ್ರದೇಶಗಳ ಹಕ್ಕಿಗಾಗಿ ಹೋರಾಡಿದ ಬುಡಕಟ್ಟು ಸಮುದಾಯದ ಬಿರ್ಸಾ ಮುಂಡಾ ಅವರ ಸಾಧನೆಯನ್ನು ಶಿರಸಿಯ ಜನ ಸ್ಮರಿಸಿದ್ದಾರೆ. ಬಿರ್ಸಾಮುಂಡಾ ಜಯಂತಿ ಅಂಗವಾಗಿ ಶಿರಸಿಯ ಓಣಿಕೇರಿ ಸುಗಾವಿಯ ನೆಹರು ಪ್ರೌಢಶಾಲೆ ಆವರಣದಲ್ಲಿ ಮೂರು ದಿನಗಳ ಕಾಲ ಹಲವು ಬಗೆಯ ಕಾರ್ಯಕ್ರಮಗಳು ನಡೆದಿವೆ.
ಕಾಡಿನಂಚಿನಲ್ಲಿ ಉಳಿದು ಕಾಡಿನ ಪ್ರಾಣಿಗಳು ಮತ್ತು ನಿಸರ್ಗದೊಂದಿಗೆ ಬದುಕಿದ ಬಿರ್ಸಾ ಮುಂಡಾ ಅವರು ತಮ್ಮ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಬುಡಕಟ್ಟು ಸಮುದಾಯದ ನಾಯಕರಾಗಿದ್ದ ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಸರ್ವ ಜನರ ಅಭಿವೃದ್ಧಿಗೆ ಹೋರಾಟ ನಡೆಸಿದ್ದರು. ಅತಂತ್ಯ ಕಡು ಬಡತನದಲ್ಲಿ ಆದಿವಾಸಿ ಕುಟುಂಬದಲ್ಲಿ ಜನಿಸಿದ ಹುಟ್ಟಿದ ಬಿರ್ಸಾ ಮುಂಡಾ ಅವರು ಕೊಳಲು ನುಡಿಸುತ್ತಾ ಜನರನ್ನು ತಮ್ಮಡೆ ಆಕರ್ಷಿಸುತ್ತಿದ್ದರು. ದೂರದೃಷ್ಠಿ ಉಳ್ಳವರಾಗಿದ್ದ ಅವರು ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಅಚಾರ ವಿಚಾರಗಳು ನಶಿಸುವುದನ್ನು ತಡೆಯುವುದಕ್ಕಾಗಿ ಶ್ರಮಿಸಿದ್ದರು. ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದರು. ಈ ಎಲ್ಲಾ ಹಿನ್ನಲೆ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ರಾಂಚಿಯಲ್ಲಿ ವಿಮಾನ ನಿಲ್ದಾಣ, ಕೃಷಿ ಕಾಲೇಜು, ಆಟದ ಮೈದಾನಗಳಿವೆ. ಅವರ ಜನ್ಮದಿನವನ್ನು ಜಾಖಂರ್ಡನ ಸಂಸ್ಥಾಪನ ದಿನ ಎಂದು ಸಹ ಕರೆಯುತ್ತಾರೆ.
ಈ ಎಲ್ಲಾ ವಿಷಯವನ್ನು ನೆಹರೂ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಉನ್ನತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಶುರುವಾದ ಈ ಕಾರ್ಯಕ್ರಮದಲ್ಲಿ ಸುಗ್ಗಾವಿ ಗ್ರಾಮ ಪಂಚಾಯತ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುವ ಬುಡಕಟ್ಟು ಸಮುದಾಯದ ಮಹಿಳೆ ಮಮತಾ ರಾಜಪ್ಪ ಬಿ, ಸುಗ್ಗಾವಿ ಬಳಿಯ ಶ್ರೀ ಮಹಾಗಣಪತಿ ಸಹಕಾರಿ ಸಂಘದ ಹಿರಿಯ ಸಹಕಾರಿ ಶ್ರೀಪಾದ ರಾಯ್ಸದ, ಶಿರಸಿಯ ಸುಭದ್ರಾ ಫೌಂಡೇಶನ್ ಅಧ್ಯಕ್ಷೆ ದೀಪಾ ತಳವಾರ್ ಮತ್ತು ನಟನೆ ನಿರ್ದೇಶನ ಮಾಡುತ್ತಿರುವ ಸುಗ್ಗಾವಿ ರಾಘವೇಂದ್ರ ಭಟ್ಟ ಅವರನ್ನು ಗೌರವಿಸಲಾಯಿತು. ಜಾನಪದ ನೃತ್ಯ, ಬಿರ್ಸಾಮುಂಡಾ ಅವರ ಬಗ್ಗೆ ನಾಟಕ, ಗೊಂಬೆಯಾಟ, ಡೊಳ್ಳು ಕುಣಿತ, ಭರತನಾಟ್ಯ, ಸಂಗೀತ ಪ್ರದರ್ಶನ, ಚಿತ್ರಕಲೆ, ಪುಸ್ತಕ ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಶ್ರೀಯಲ್ಲಮ್ಮ ಕಲ್ಚರಲ್ ಅಸೊಶಿಯೇಶನ್’ನ ವಸಂತ ನಾಯ್ಕ ಅವರು ಬಹುಮಾನ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ರಾಜಪ್ಪ ಬಿ ಅವರು ಇದ್ದರು.