ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆಸಕ್ತಿವಹಿಸಿದ್ದು, ಇದಕ್ಕಾಗಿ ಜನವರಿ 10ರಂದು ಮಂಗಳೂರಿನಲ್ಲಿ ವಿಶೇಷ ಸಭೆ ನಡೆಯಲಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಸಭೆ ನಡೆಸಲಿದ್ದು ಮೂರು ಜಿಲ್ಲೆಯ ಶಾಸಕರು-ಸಂಸದರ ಜೊತೆ ಇನ್ನಿತರ ಜನಪ್ರತಿನಿಧಿಗಳು ಹಾಗೂ ಉದ್ದಿಮೆದಾರರಿಗೂ ಆಮಂತ್ರಿಸಲಾಗಿದೆ.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ರಾಜ್ಯದಲ್ಲಿ ಗೋವಾದ ಗಡಿಯಿಂದ ಮಂಗಳೂರಿನ ಗಡಿಯವರೆಗೆ 344 ಕಿಮೀ ಕಡಲ ತೀರವಿದೆ. ಇಲ್ಲಿನ ಜನತೆ ಉದ್ಯೋಗ ಅರಸಿ, ಇತರೆ ಜಿಲ್ಲೆ, ರಾಜ್ಯಗಳಿಗೆ ತೆರಳದೇ ಅವರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಇಲ್ಲಿಯೇ ಉದ್ಯೋಗ ಸೃಷ್ಠಿಸಿ, ಆದಾಯದ ಮೂಲಗಳನ್ನು ಸೃಷ್ಠಿಸುವ ಮೂಲಕ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧ್ದಿಪಡಿಸುವ ಉದ್ದೇಶದಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನೀತಿಯನ್ನು ರಚಿಸಲಾಗುತ್ತಿದೆ’ ಎಂದವರು ಮಾಹಿತಿ ನೀಡಿದ್ದಾರೆ.
`ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಸಿ ಆರ್ ಝಡ್ ನಿಯಮಗಳಲ್ಲಿ ರಿಯಾಯತಿ ನೀಡುವ ಕುರಿತಂತೆ ಈ ಸಭೆಯಲ್ಲಿ ಚರ್ಚಿಸಿ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ರಿಯಾಯತಿ ಕೋರಿ ಪತ್ರ ಬರೆಯಲಾಗುತ್ತದೆ. ಗೋವಾ ಪ್ರವಾಸೋದ್ಯಮ ಸಚಿವರನ್ನೂ ಸಹ ಸಭೆಗೆ ಆಹ್ವಾನಿಸಲಾಗಿದೆ’ ಎಂದವರು ಹೇಳಿದ್ದಾರೆ. `ಕರಾವಳಿ ಪ್ರದೇಶದಲ್ಲಿನ ಪರಿಸರ, ಮೀನುಗಾರಿಕೆ, ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದAತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ಬಂಡವಾಳ ಹೂಡಿಕೆದಾರರನ್ನು ಸಭೆಗೆ ಆಹ್ವಾನಿಸಲಾಗಿದೆ, ಇಲ್ಲಿ ಬಂಡವಾಳ ಹೂಡುವವರಿಗೆ ರಿಯಾಯತಿ ದರದಲ್ಲಿ ಭೂಮಿ, ವಿದ್ಯುತ್, ನೀರು ಸೇರಿದಂತೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದರು.
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಪ್ರವಾಸಿ ಕ್ಷೇತ್ರದ ಪರಿಣಿತರು, ಸಾರ್ವಜನಿಕರು ತಮ್ಮ ಸಲಹೆ, ಯೋಜನೆಗಳು ಮತ್ತು ಸೂಚನೆಗಳನ್ನು ನೀಡುವಂತೆ ಸಚಿವರು ತಿಳಿಸಿದರು. ಶಾಸಕ ಸತೀಶ್ ಸೈಲ್ ಮಾತನಾಡಿ `ಕರಾವಳಿ ಭಾಗದಲ್ಲಿ ಸಿ ಆರ್ ಝಡ್ ನಿಯಮಗಳಲ್ಲಿ ಸಡಿಲಿಕೆ, ಬಂಡವಾಳ ಹೂಡಿಕೆದಾರರಿಗೆ ತೆರಿಗೆ ಮತ್ತು ವಿದ್ಯುತ್ ರಿಯಾಯತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದಲ್ಲಿ ಹೆಚ್ಚಿನ ಹೂಡಿಕೆದಾರರು ಆಗಮಿಸಲಿದ್ದಾರೆ’ ಎಂದು ತಿಳಿಸಿದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ `ಮಲೆನಾಡು ಭಾಗದಲ್ಲಿನ ಜಲಪಾತಗಳ ವೀಕ್ಷಣೆಗೆ ಮುಕ್ತ ಅವಕಾಶ ಹಾಗೂ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದರು. `ಪ್ರವಾಸಿ ಸ್ಥಳಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹೋಟೆಲ್ ಗಳು, ಮುಖ್ಯ ಸ್ಥಳಗಳಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವ್ಯವಸ್ಥೆ, ಕುಟುಂಬ ಸಮೇತ ಪ್ರವಾಸಕ್ಕೆ ಬಂದು ಆನಂದಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಹೋಂ ಸ್ಟೇ ಗಳಿಗೆ ಅಗತ್ಯ ಅನುಮತಿಯನ್ನು ನೀಡಬೇಕು. ಜಿಲ್ಲೆಯಲ್ಲಿ ವಿವಿಧ ರೀತಿಯ 15 ಬಗೆಯ ಟೂರಿಸಂ ಸರ್ಕಿಟ್ಗಳಿದ್ದು ಅವುಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಭೆಯಲ್ಲಿ ಹಾಜರಿದ್ದ ಪ್ರವಾಸ ಕ್ಷೇತ್ರದ ಪರಿಣಿತರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ, ಜಿ ಪಂ. ಸಿಇಓ ದಿಲೀಷ್ ಶಶಿ, ಎಸ್ಪಿ ದೀಪನ್ ಎಂ ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಪ್ರೋಬೇಷನರಿ ಅಧಿಕಾರಿ ಝೂಪಿಶಾನ್ ಹಕ್ ಇತರರಿದ್ದರು.