ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ನಡೆಸಿದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ್ದು, ಸಮಿತಿ ಸದಸ್ಯರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. `ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ತಕ್ಷಣ ಪರಿಹಾರ ವಿತರಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ.
`ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ದಾಖಲೆಗಳ ಕೊರತೆಯಿಂದ ಅನುಕಂಪ ಆಧಾರದ ನೌಕರಿ ನೀಡುವಲ್ಲಿ ವಿಳಂಬವಾಗುತ್ತಿದೆ. ದಾಖಲೆಗಳನ್ನು ದೊರಕಿಸುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಮತುವರ್ಜಿ ವಹಿಸಿ, ಒಂದು ತಿಂಗಳ ಒಳಗೆ ಈ ಪ್ರಕರಣವನ್ನು ಇತ್ಯರ್ಥ ಪಡಿಸಸಬೇಕು’ ಎಂದವರು ಸೂಚಿಸಿದ್ದಾರೆ.
ಮುಖ್ಯವಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಮಾತನಾಡಿದ್ದಾರೆ. `ಬೆಳೆ ರಕ್ಷಣೆಗೆ ರೈತರಿಗೆ ಬಂದೂಕು ಅಗತ್ಯವಿದ್ದು, ಮೂರು ತಿಂಗಳ ಒಳಗೆ ಪರವಾನಿಗೆ ಕೊಡಬೇಕು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿಗೆ ಜಾಗ ಮೀಸಲಿಡಬೇಕು. ಸಿದ್ದಾಪುರದಲ್ಲಿ ರೈತರ ಅಡಿಕೆ ಮರ ಕಟಾವು ನಡೆದಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಕುಮಟಾದಲ್ಲಿರುವ ಹಕ್ಕಿ-ಪಿಕ್ಕಿ ಜನಾಂಕದವರಿಗೆ ಸರ್ಕಾರಿ ಸೌಲಭ್ಯ ಸಿಗದ ಬಗ್ಗೆ ಗಮನಿಸಬೇಕು. ಅಂಕೋಲಾ ತಾಲೂಕಿನ ವಾಲ್ಮೀಕಿ ಸಮುದಾಯದ ಭವನ ಶೀಘ್ರದಲ್ಲಿ ಉದ್ಘಾಟನೆ ಆಗಬೇಕು. ಫಸಲ್ ಭೀಮಾ ಯೋಜನೆ ಹಣ ಅತಿಕ್ರಮಣದಾರರಿಗೂ ಸಿಗಬೇಕು’ ಎಂದು ಸಮಿತಿ ಸದಸ್ಯ ಸುರೇಶ ಸಿದ್ದಿ ಅವರು ಸಭೆಯ ಗಮನಕ್ಕೆ ತಂದಿದ್ದಾರೆ.
ಸಮಿತಿ ಸದಸ್ಯರ ಗುರುತಿನ ಚೀಟಿ, ಜಾತಿ ನಿಂದನೆ ವಿಷಯವಾಗಿ ದಾಖಲಾಗುವ ಸುಳ್ಳು ಪ್ರಕರಣ, ಅಕ್ರಮ ಮರಳುಗಾರಿಕೆ, ಗ್ರಾಮ ಪಂಚಾಯತದ ಶೇ 2ರ ಮೀಸಲು ಅನುದಾನದಲ್ಲಿ ಕ್ರೀಡಾ ಉಪಕರಣ ಖರೀದಿ, ದಲಿತರ ಜಮೀನು ಮಾರಾಟ ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಭೆಯಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಸಮಿತಿಯ ಸದಸ್ಯರಾದ ವಿಶ್ವನಾಥ ಹೆಗಡೆ ಕೂಜಳ್ಳಿ, ಮಾರುತಿ ನಿಂಗಪ್ಪ ಗವಾಡಿ, ರಾಘವೇಂದ್ರ ಜಟ್ಟಿ ಮುಕ್ರಿ, ಪಾತಿಂಬಿ ಫ ಮಾಂಡೇಕರ, ಸುಭಾಷ ಈಶ್ವರ ನಾಯ್ಕ, ರವಿಕುಮಾರ್ ದ ಮಾಳಕರಿ ಇತರರಿದ್ದರು.