ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನದಿಗಳ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಟ್ಟದೃಷ್ಠಿ ಬೀರಿದ್ದಾರೆ. ಸಂಸದರಾಗಿರುವ ಅವರು ನದಿ ತಿರುವು ಯೋಜನೆ ಪರವಾಗಿ ಭಾಷಣ ಮಾಡಿದ್ದು, `ನಿಸರ್ಗ ಕೊಟ್ಟ ನದಿ ಒಂದು ಜಿಲ್ಲೆಗೆ ಮಾತ್ರ ಸೀಮಿತವಲ್ಲ’ ಎಂದು ಮೂರ್ಖತನದ ಮಾತನಾಡಿದ್ದಾರೆ.
`ನದಿ ಉಳಿಸಿ’ ಅಭಿಯಾನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಅಭಿಯಾನಕ್ಕೆ ಪ್ರತಿಯಾಗಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಹುಕ್ಕೇರಿಮಠದಲ್ಲಿ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ `ಬೆಡ್ತಿ ವರದಾ ನದಿ ಜೋಡಣೆ ಯೋಜನೆ ನಮ್ಮ ಬದುಕಿನ ಪ್ರಶ್ನೆ’ ಎಂದು ಭಾಷಣ ಮಾಡಿದ್ದಾರೆ. ಆ ಭಾಗದ ಸರ್ವ ಪಕ್ಷದ ನಾಯಕರು ಸಭೆಗೆ ಆಗಮಿಸಿ ಚಪ್ಪಾಳೆ ಹೊಡೆದಿದ್ದಾರೆ.
`ನಿಸರ್ಗ ತನ್ನದೇ ಆದ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ. ಆ ನದಿಯ ನೀರು ಅವರು ಇಟ್ಟಕೊಳ್ಳಲು ಸಾಧ್ಯವೂ ಇಲ್ಲ. ಪೂರ್ಣ ಬಳಕೆ ಮಾಡಲು ಅಸಾಧ್ಯ. ನದಿ ತುಂಬಿ ಹರಿಯುವಾಗ ಒಂದು ಕೊಡಪಾನ ನೀರು ತೆಗೆದರೆ ಏನೂ ಆಗುವುದಿಲ್ಲ. ನದಿ ಜೋಡಣೆಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಹಾನಿ ಆದರೂ ಅದಕ್ಕೆ ಪಯಾರ್ಯ ವ್ಯವಸ್ಥೆ ಮಾಡುತ್ತೇವೆ’ ಎಂದು ಬೊಮ್ಮಾಯಿ ಭಾಷಣದಲ್ಲಿ ಹೇಳಿದ್ದಾರೆ. ವಿವಿಧ ಮಠಾಧೀಶರ ಬೆಂಬಲಪಡೆದ ಬೊಮ್ಮಾಯಿ ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಶುರು ಮಾಡಿದ್ದಾರೆ.
`ಎರಡು ಕಡೆಯಿಂದ ನೀರು ತೆಗೆದಾಗ ಡ್ಯಾಮ್ ಬದಲು ಬ್ಯಾರೆಜ್ ಕಟ್ಟುತ್ತೇವೆ. ನದಿ ಪಾತ್ರದ ಹೊರಗಡೆಯಿಂದ ನದಿ ನೀರನ್ನು ಲಿಪ್ಟ್ ಮಾಡುವ ವ್ಯವಸ್ಥೆ ಮಾಡುತ್ತೇವೆ. ನದಿ ಪಾತ್ರದ ಜನರ ಜೀವಕ್ಕೆ ಸಮಸ್ಯೆ ಆಗದ ಹಾಗೇ ನೋಡಿಕೊಳ್ಳುತ್ತೇವೆ. ನಿಮ್ಮೂರಿನ ಮುಂದಿನ ಭವಿಷ್ಯ ತೀರ್ಮಾನ ಮಾಡುವುದು ಬೆಡ್ತಿ ವರದಾ ನದಿ ಜೋಡಣೆಯಿಂದ ಮಾತ್ರ ಸಾಧ್ಯ’ ಎಂದು ಹೇಳಿದ್ದಾರೆ. `ನದಿ ತಿರುವು ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದೆ. ಈಗ ಡಿಪಿಆರ್ ಮಾಡಲು ಎಂಒಯು ಸೈನ್ ಆಗಿದೆ. ಅವರು ವಿರೋಧ ಮಾಡಿದ ಮಾತ್ರಕ್ಕೆ ನಾವು ವಿರೋಧ ಮಾಡಲು ಸಾಧ್ಯವಿಲ್ಲ. ನದಿ ತಿರುವಿನ ನೀರು ನಮ್ಮ ಬದುಕಿನ ಪ್ರಶ್ನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
`ಈ ಯೋಜನೆ ನಮ್ಮ ಬದುಕಿನ ಹೋರಾಟವಾಗಿದ್ದು, 25 ವರ್ಷಗಳಿಂದ ಪ್ರಯತ್ನ ನಡೆದಿದೆ. ನಮಗೆ ಎಷ್ಟು ನೀರು ಬೇಕು ಅದನ್ನು ನಾವುಪಡೆಯಬೇಕು. ಅದಕ್ಕಾಗಿ ಇನ್ನಷ್ಟು ಹೋರಾಟ ನಡೆಸಬೇಕು. ಈ ಬಗ್ಗೆ ಜನ ಜಾಗೃತಿ ಅಗತ್ಯ’ ಎಂದೂ ಹೇಳಿದ್ದಾರೆ. `ಸುಧೀರ್ಘ ಹೋರಾಟಕ್ಕೆ ಜನ ಸೇರಬೇಕು. ಬೇಸರ ಮಾಡಿಕೊಳ್ಳದೇ ಹೋರಾಟಕ್ಕೆ ಬರಬೇಕು. ನಮ್ಮ ಪ್ರಯತ್ನದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆದರೂ ಸಮಸ್ಯೆ ಆಗಲಿದ್ದು, ಸಮಸ್ಯೆ ತಡೆಯಲು ತಕಬದ್ಧವಾಗಿ ಕೆಲಸ ಮಾಡಿ ಜಯಗಳಿಸಬೇಕು’ ಎಂದು ಹಾವೇರಿ ಜನರನ್ನು ಹೋರಾಟಕ್ಕೆ ಬರುವಂತೆ ಪ್ರೇರೇಪಿಸಿದ್ದಾರೆ. `ನೀರಾವರಿ ಯೋಜನೆಗೆ ಸಾಕಷ್ಟು ಅಡೆತಡೆಗಳಿರುತ್ತವೆ. ಅದನ್ನು ಮೀರಿ ಹೋರಾಟ ನಡೆಸಬೇಕು’ ಎಂದವರು ಹೇಳಿದ್ದಾರೆ.