ಭಟ್ಕಳದ ಬೈಲೂರಿನಲ್ಲಿ ಏಳು ಜನ ಮುಸ್ಲೀಂ ಸಮುದಾಯದ ಬಾಲಕರು ಸೇರಿ ಹಿಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬೈಕಿನಲ್ಲಿ ಗುಂಪು ಗುಂಪಾಗಿ ಆಗಮಿಸಿ, ಮನೆಗಳ ಮೇಲೆ ಕಲ್ಲು ಎಸೆಯುತ್ತಿದ್ದ ಅಪ್ತಾಪ್ತರನ್ನು ಊರಿನ ಜನ ಹಿಡಿದಿದ್ದಾರೆ.
ಫೆಬ್ರವರಿ 23ರಂದು ಮುರುಡೇಶ್ವರ ಬಸ್ತಿಮಕ್ಕಿಯ ಇಬ್ರಾಹಿಂ ಇಹಾಲ್ ಅವರು ತಮ್ಮ ಸಹಚರರಾದ ನ್ಯಾಶನಲ್ ಕಾಲೋನಿಯ ಅಬ್ಬಾಸ್ ಹಜೀಬ್, ಹಮ್ಮಾ ಕಾಲೋನಿಯ ರಯಾನ್ ಫರಾಸ್, ಜಮೀಲಾ ಮಸೀದ್ ಬಳಿಯ ನಶ್ವಾಲ್ ಗೈಮಾ, ಮಹಮದ್ ರ್ಜಾನ್, ಬಸ್ತಿಮಕ್ಕಿಯ ಅಪ್ಪಾನ್ ಆರೀಪ್, ರಿಯಾಜ್ ತಿರುವಳ್ಳಿ ಜೊತೆ ಬೈಕ್ ಸಂಚಾರ ಮಾಡಿದ್ದಾರೆ. ಆ ದಿನ ಬೆಳಗ್ಗೆ ಬೈಕಿನಲ್ಲಿ ಹೋಗುವಾಗ ಒಂದಷ್ಟು ಕಲ್ಲುಗಳನ್ನು ತೆಗೆದುಕೊಂಡಿದ್ದು, ಅದನ್ನು ಬೈಲೂರು ಮಾರ್ಕಂಡೇಶ್ವರದ ಸಮೀಪದ ದಿನಕರ ನಾಯ್ಕ ಅವರ ಮನೆಗೆ ಹೊಡೆದಿದ್ದಾರೆ. ಈ ವೇಳೆ `ಯಾರೋ ತಮಾಷೆಗೆ ಕಲ್ಲು ಹೊಡೆದಿರಬಹುದು’ ಎಂದು ಭಾವಿಸಿ ಜನ ಸುಮ್ಮನ್ನಾಗಿದ್ದಾರೆ. ಆದರೆ, ಅದೇ ದಿನ ರಾತ್ರಿ ಆ ಏಳು ಜನರ ಜೊತೆ ಇನ್ನಿತರರು ಸೇರಿಕೊಂಡು ಇನ್ನಷ್ಟು ರಂಪಾಟ ಮಾಡಿದ್ದಾರೆ.
ಮಾರ್ಕಂಡೇಶ್ವರ ಬಳಿಯ ಮಂಜುನಾಥ ಮುಕುಂದ ಮಡಿವಾಳ ಅವರು ರಾತ್ರಿ ತಮ್ಮ ಸ್ನೇಹಿತರಾದ ನಾಗರಾಜ ನಾಯ್ಕ, ದಿನಕರ ನಾಯ್ಕ, ಈಶ್ವರ ನಾಯ್ಕ, ಮಾರುತಿ ಮಡಿವಾಳ, ಗಣಪತಿ ಶಂಕರ್ ನಾಯ್ಕ ಹಾಗೂ ವಸಂತ ನಾಯ್ಕ ಅವರ ಜೊತೆ ಮಾತನಾಡುತ್ತಿದ್ದಾಗ ಆ ಎಲ್ಲರೂ ಎದುರಾಗಿದ್ದಾರೆ. 5-6 ಜನ ಹುಡುಗರು ಅಕ್ರಮ ಕೂಟ ಕಟ್ಟಿಕೊಂಡು ಅಲ್ಲಿಗೆ ಆಗಮಿಸಿದ್ದು, ದೊಡ್ಡ ಗಲಾಟೆ ಮಾಡಿದ್ದಾರೆ. ಆ ಹುಡುಗರೆಲ್ಲರೂ ಸೇರಿ ಅಲ್ಲಿದ್ದ ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ಅಡ್ಡಾದಿಡ್ಡಿ ಬೈಕ್ ಓಡಿಸಿ ಅಲ್ಲಿದ್ದವರನ್ನು ಹೆದರಿಸಿದ್ದಾರೆ. ದಿನಕರ ನಾಯ್ಕ, ಮಹೇಶ ದೇವಾಡಿಗ ಹಾಗೂ ರವೀಂದ್ರ ಪೈ ಅವರ ಮೇಲೆ ಆ ಆಗಂತುಕರು ಕಲ್ಲು ಹೊಡೆದಿದ್ದು, ಅದಾದ ನಂತರ ಮಡಿಕೇರಿ ರಸ್ತೆಯ ಕಡೆಯಿದ್ದ ಶಶಾಂಕ ನಾಯ್ಕ, ನಾಗರಾಜ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರ ಮನೆಯ ಕಡೆಗೂ ಕಲ್ಲು ತೂರಿದ್ದಾರೆ.
ಆಗ, ಊರಿನವರೆಲ್ಲರೂ ಸೇರಿ ಕಲ್ಲು ತೂರಿದವರನ್ನು ತಡೆದಿದ್ದಾರೆ. ಆ ಮೂಲಕ ಇನ್ನಷ್ಟು ಹಾನಿ ಆಗುವುದನ್ನು ತಪ್ಪಿಸಿದ್ದಾರೆ. `ಯಾಕೆ ಹೀಗೆ ಮಾಡಿದ್ದೀರಿ?’ ಎಂದು ಪ್ರಶ್ನಿಸಿದಾಗ ಹಿಂದು ಸಮುದಾಯದವರನ್ನು ನಿಂದಿಸಿದ್ದಾರೆ. ಆ ಅಪ್ರಾಪ್ತರ ಕಲ್ಲು ತೂರಾಟದಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯೇ ಮುರ್ಡೇಶ್ವರ ಪೊಲೀಸ್ ಠಾಣೆ ಎದುರು ಜಮಾಯಿಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿತರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಕೋಮುಗಳ ನಡುವೆ ಅಸೌಹಾರ್ದತೆ ಮೂಡಿಸಲು ಪಡ್ಡೆ ಹುಡುಗರು ಈ ಕೃತ್ಯ ನಡೆಸಿದ ಅನುಮಾನಗಳಿವೆ.