ಸಮೃದ್ಧವಾಗಿ ಬೆಳೆದ ತೆಂಗಿನ ಮರಗಳಿಗೆ ಕೆಂಪು ಮೂತಿಯ ಕೀಟವೊಂದು ಕಾಟ ಕೊಡುತ್ತಿದೆ. ಸಂಪತ್ಬರಿತ ಫಲ ಕೊಡುವ ಮರಗಳನ್ನು ಸಹ ಸಣ್ಣ ಬಗೆಯ ಕೀಟವೊಂದು ಸಾಯಿಸುತ್ತಿದೆ.
ಸದ್ಯ ಅಂಕೋಲಾ ಹಿಚಕಡ, ಶಟಗೇರಿ, ಕಣಗಿಲ್, ಮೊಗಟಾ ಭಾಗದ ತೆಂಗಿನ ಮರಗಳು ಕೀಟ ಬಾಧೆಯಿಂದ ಸೊರಗಿವೆ. ದುಂಬಿ ಹುಳುಗಳ ದಾಳಿಗೆ ತೆಂಗಿನ ಮರವೇ ನಾಶವಾಗುತ್ತಿದೆ. ತೆಂಗಿನ ಮರದ ಕಾಂಡಕ್ಕೆ ಸಣ್ಣ ಸಣ್ಣ ರಂದ್ರ ಮಾಡುವ ಕೀಟಗಳು ಅದರ ಒಳಗೆ ನುಸುಳಿ ಮೃದು ಭಾಗವನ್ನು ತಿನ್ನುತ್ತಿವೆ. ಕಾಂಡ ಕೊರೆದು ಆಗುವ ಹಾನಿ ಸಹಿಸಲಾಗದೇ ಮರ ಬೀಳುತ್ತಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್-ಡಿಸೆAಬರ್ ಅವಧಿಯಲ್ಲಿ ಈ ಕೀಟದ ಕಾಟ ಜೋರಾಗಿರುತ್ತಿತ್ತು. ಆದರೆ, ಇದೀಗ ಫೆಬ್ರವರಿಯಲ್ಲಿಯೇ ಕೀಟ ಬಾಧೆ ಉಲ್ಬಣವಾಗಿದೆ. ಮರದ ಕಾಂಡದ ಮೇಲೆ ಚಿಕ್ಕ ಚಿಕ್ಕ ರಂದ್ರ ಕಾಣಿಸುವುದು ಕೀಟ ಬಾಧೆಯನ್ನು ಗುರುತಿಸುವ ಲಕ್ಷಣಗಳಲ್ಲಿ ಒಂದು. ಕೀಟದ ದಾಳಿಗೆ ಮರ ತತ್ತರಿಸುತ್ತಿದ್ದು, ರೈತರು ಮುನ್ನಚ್ಚರಿಕೆವಹಿಸದೇ ಇದ್ದರೆ ಮರ ಉಳಿಸಿಕೊಳ್ಳುವುದು ಸಹ ಕಷ್ಟವಾಗಲಿದೆ.
`ಕೀಟದಿಂದ ತೆಂಗಿನ ಮರ ರಕ್ಷಿಸಿಕೊಳ್ಳಲು ತೋಟದಲ್ಲಿ ಸ್ವಚ್ಚತೆ ಕಾಪಾಡಬೇಕು. ಕೀಟ ಕಾಣಿಸಿದ ತಕ್ಷಣ ಅದನ್ನು ನಾಶಪಡಿಸಬೇಕು. ತೆಂಗಿನ ಜೊತೆ ಅಂತರ ಬೆಳೆಯಾಗಿ ಶುಂಠಿ, ಅರಶಿನ, ಬಾಳೆ, ಮೆಣಸು ಬೆಳೆದು ವರಮಾನ ಹೆಚ್ಚಿಸಿಕೊಳ್ಳಬೇಕು’ ಎಂಬುದು ವಿಜ್ಞಾನಿಗಳ ಮಾತು. ಕೀಟ ಬಾಧೆಯಿಂದ ತತ್ತರಿಸಿದ ಮರಗಳನ್ನು ವೀಕ್ಷಿಸಿದ ವಿಜ್ಞಾನಿಗಳು ರೈತರಿಗೆ ಈ ಮಾಹಿತಿ ಒದಗಿಸಿದರು.