ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸ್ಥಳೀಯ ಆಡಳಿತ ಬಿಲ್ ಪಾವತಿ ಮಾಡಿಲ್ಲ. ಸರ್ಕಾರದ ಸೂಚನೆ ಮೇರೆಗೆ ಸಾಲ ಮಾಡಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಗುತ್ತಿಗೆದಾರರು ಆಗಿರುವ ಸಾಮಾಜಿಕ ಹೋರಾಟಗಾರ ಕಿರಣ ಶಿರೂರು ಅವರು ಧ್ವನಿ ಎತ್ತಿದ್ದಾರೆ. ಸರ್ಕಾರದ ವಿಳಂಭ ನೀತಿಯ ವಿರುದ್ಧ ಅವರು ಪ್ರತಿಭಟನೆಯನ್ನು ನಡೆಸಿದ್ದಾರೆ. `10 ತಿಂಗಳ ಹಿಂದೆ ಕಾಮಗಾರಿ ಪೂರ್ಣವಾಗಿದ್ದರೂ ಆ ಹಣ ಪಾವತಿ ಆಗಿಲ್ಲ. ಹೀಗಾಗಿ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಆರ್ಥಿಕ ಒತ್ತಡದ ಕಾರಣದಿಂದ ಅವರು ಮಾನಸಿಕವಾಗಿಯೂ ಕುಗ್ಗಿದ್ದಾರೆ’ ಎಂದವರು ಅಧಿಕಾರಿಗಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. `ಸಾಲ ಮಾಡಿ ಸರ್ಕಾರಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಡ್ಡಿ ಮೊತ್ತ ಪಾವತಿಗೂ ಸಾಧ್ಯವಾಗುತ್ತಿಲ್ಲ. ಕೂಡಲೇ ಸ್ಥಳೀಯ ಆಡಳಿತ ಬಿಲ್ ಮೊತ್ತ ಪಾವತಿ ಮಾಡಬೇಕು’ ಎಂದವರು ಆಗ್ರಹಿಸಿದ್ದಾರೆ.
`ಭಟ್ಕಳ ಮತ್ತು ಜಾಲಿ ಸುತ್ತಲಿನ ಪ್ರದೇಶದಲ್ಲಿ ಸುಮಾರು 7 ಲಕ್ಷ ರೂ ಮೌಲ್ಯದ ಕಾಮಗಾರಿ ನಡೆಸಲಾಗಿದೆ. ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದರೂ ಗುತ್ತಿಗೆದಾರರಿಗೆ ಅಲ್ಲಿನ ಆಡಳಿತ ಹಣ ಪಾವತಿ ಮಾಡಿಲ್ಲ. ಬಿಲ್ ಪಾವತಿ ವಿಳಂಬವಾಗುತ್ತಿರುವುದರಿAದ ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತಿದೆ. ಈ ಬಗ್ಗೆ ಪೌರಾಡಳಿತ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದವರು ಸಮಸ್ಯೆ ವಿವರಿಸಿದ್ದಾರೆ.
`ಅನುದಾನ ಬಿಡುಗಡೆಯ ವಿಳಂಬವೇ ಬಿಲ್ ಪಾವತಿ ಸಮಸ್ಯೆಗೆ ಕಾರಣ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹೊಸ ಸಾಲಿನ ಅನುದಾನ ಪೂರ್ಣವಾಗಿ ಬಿಡುಗಡೆಯಾಗುವ ಮೊದಲು ಕೆಲವು ಸ್ಥಳಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭ ಮಾಡಲಾಗುತ್ತಿದೆ. ಅದು ಸರಿಯಾದ ಕ್ರಮವಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದ್ದಾರೆ. ಮುಂದಿನ 10 ದಿನದಲ್ಲಿ ಸಮಸ್ಯೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.