`ಅರಣ್ಯವಾಸಿಗಳಿಗೆ ಹಕ್ಕು ಪತ್ರ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಘೋಷಿಸಿದ್ದಾರೆ. `ಸರ್ಕಾರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಎಂದಿಗೂ ಬಿಡುವುದಿಲ್ಲ’ ಎಂದವರು ಭರವಸೆ ನೀಡಿದ್ದಾರೆ.
ಕಾರವಾರದ ಕದ್ರಾದಲ್ಲಿ ತಾಲೂಕು ಮಟ್ಟದ 5ನೇ ರೈತ ಸಮ್ಮೇಳನ ಉದ್ಘಾಟಿಸಿದ ಅವರು ಈ ಘೋಷಣೆ ಮಾಡಿದರು. `50 ವರ್ಷಗಳಿಂದ ಭೂಮಿ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟದಿಂದಲೇ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು, ಕಾಯ್ದೆಯಲ್ಲಿ ತೊಂದರೆಯಿದ್ದರೆ ಅದನ್ನು ತಿದ್ದುಪಡಿ ಮಾಡಿ ಹಕ್ಕು ಪತ್ರ ನೀಡಬೇಕು. ಅದಕ್ಕಾಗಿ ಎಲ್ಲಾ ಬಗೆಯ ಹೋರಾಟಕ್ಕೂ ನಾವು ಸಿದ್ಧ’ ಎಂದು ಶಾಂತರಾಮ ನಾಯಕ ಅವರು ಆಕ್ರೋಶದ ಮಾತುಗಳನ್ನಾಡಿದ್ದಾರೆ. `ಅರಣ್ಯ ಭೂಮಿ ಹಕ್ಕಿಗಾಗಿ ಅರ್ಜಿ ಹಾಕಿದವರಿಗೆ ಅನಗತ್ಯ ಸಮಸ್ಯೆ ಮಾಡಲಾಗುತ್ತಿದೆ. ಇದೀಗ ಅಧಿಕಾರಿಗಳ ತಂಡ ಮತ್ತೆ ಪರಿಶೀಲನೆ ನೆಪದಲ್ಲಿ ಅಲೆದಾಡಿಸುತ್ತಿದೆ. ಜನಪ್ರತಿನಿಧಿಗಳಿಲ್ಲದ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಗ್ರಾಮ ಅರಣ್ಯ ಹಕ್ಕು ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಆಕ್ಷೇಪಿಸಿದರು. `ಕಾರವಾರದಲ್ಲಿ 5 ಸಾವಿರದಷ್ಟು ಅರಣ್ಯವಾಸಿಗಳಿದ್ದು ಎಲ್ಲರೂ ಸಂಘಟಿತರಾಗಬೇಕು’ ಎಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅವರು ಮಾತನಾಡಿ `ರೈತ ಮತ್ತು ಕೂಲಿಕಾರರ ಬೇಡಿಕೆಗಳಿಗಾಗಿ ತೀವ್ರ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು. ಉಳಗಾ-ಕೇರವಡಿ ನಡುವಿನ ಕಾಳಿ ನದಿ ಸೇತುವೆ ತುರ್ತಾಗಿ ಮುಗಿಸಲು ಆಗ್ರಹಿಸಿದರು. `ಕೈಗಾ ಅಣು ವಿದ್ಯುತ್ ಘಟಕದಲ್ಲಿ ಮತ್ತು ನೌಕಾ ನೆಲೆಯಲ್ಲಿ ಸ್ಥಳೀಯರಿಗೆ ಖಾಯಂ ಉದ್ಯೋಗ ಕೋಡಬೇಕು. ಕದ್ರಾ ಆಣೆಕಟ್ಟು ನಿರಾಶ್ರಿತರಿಗೆ ಶಾಶ್ವ ಪುನರ್ವಸತಿ ಒದಗಿಸಬೇಕು’ ಎಂದು ಈ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಈ ವೇಳೆ ಸಂಘಟನೆಯ ನೂತನ ಸಮಿತಿ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಮೋಹಿನಿ ನಮಸೇಕರ, ಉಪಾಧ್ಯಕ್ಷರಾಗಿ ಉಲ್ಲಾಸ ತಳೇಕರ, ಭಾರತಿ ಎಸ್ ಕೆ. ಕದ್ರಾ, ಕಾರ್ಯದರ್ಶಿಯಾಗಿ ಸಂತೋಷ ನಾಯ್ಕ ಜರಡಿ, ಸಹಕಾರ್ಯದರ್ಶಿಯಾಗಿ ಅಂತೋನ ರೇಗೋ, ಪ್ರೇಮಾ ಸಾಲ್ಗಾಂವಕರ ಆಯ್ಕೆಯಾದರು, ಸಮಿತಿ ಸದಸ್ಯರಾಗಿ ನಿರ್ಮಲಾ ಕೃಷ್ಣ, ಅಶ್ವಿನಿ ಪೆಡ್ನೆಕರ, ಸೂರ್ಯನಾರಾಯಣ ಭಟ್, ದೇವಪ್ಪ ಮುರೋಳ, ಶಂಬಾಜಿ ಕೆ ನಾಯ್ಕ, ಸಂಜನಾ ಎಸ್ ಕಲ್ಗುಟಕರ ಆಯ್ಕೆಯಾದರು. ಅವರೆಲ್ಲರೂ ಕಾರ್ಯಕ್ರಮದಲ್ಲಿದ್ದರು. ಸಂತೋಷ ನಾಯ್ಕ ಜರಡಿ ಅಧ್ಯಕ್ಷತೆವಹಿಸಿದ್ದರು.