ಮಾಂಸದ ಆಸೆಗಾಗಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಲಾರಿಯನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಪೊಲೀಸರನ್ನು ಕಂಡ ಬೆಲ್ಲದ ಬಾಗೆವಾಡಿಯ ದ್ಯಾನೇಶ ಪರಾರಿಯಾಗಿದ್ದು, ವಾಹನ ಓಡಿಸುತ್ತಿದ್ದ ಮೈಸೂರಿನ ಮಹಮದ್ ರಫೀ ಜಾಫರ್ ಪಾಷಾ ಸಿಕ್ಕಿಬಿದ್ದಿದ್ದಾರೆ.
ಧಾರವಾಡದ ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಈಚರ್ ವಾಹವನನ್ನು ಫೆಬ್ರವರಿ 2ರ ರಾತ್ರಿ 11.50ಕ್ಕೆ ಯಲ್ಲಾಪುರ ಜೋಡಕೆರೆಯ ಬಳಿ ಪಿಸೈ ರಾಜಶೇಖರ ವಂದಲಿ ಅವರು ತಡೆದಿದ್ದಾರೆ. ಆ ವಾಹನ ತಪಾಸಣೆ ನಡೆಸಿದಾಗ ಅದರೊಳಗೆ 19 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಕಾಣಿಸಿದೆ. 12 ಹೋರಿ, 4 ಕೋಣ ಹಾಗೂ 3 ಎಮ್ಮೆಗಳಿಗೆ ಮಲಗಲು ಸಹ ಜಾಗವಿಲ್ಲದ ರೀತಿ ಅದನ್ನು ಸಾಗಿಸಲಾಗಿದ್ದು, ತಕ್ಷಣ ಪೊಲೀಸರು ಆ ಜಾನುವಾರುಗಳ ಜೀವ ಉಳಿಸಿದ್ದಾರೆ.
ಪೊಲೀಸರು ಲಾರಿಗೆ ಅಡ್ಡಲಾಗಿ ಕೈ ಮಾಡಿದ ಕೂಡಲೇ ಅಕ್ರಮ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿದ್ದ ಬಾಗೆವಾಡಿಯ ದ್ಯಾನೇಶ ಓಡಿ ಪರಾರಿಯಾಗಿದ್ದಾರೆ. ಲಾರಿ ಚಲಾಯಿಸುತ್ತಿದ್ದ ಮಹಮದ್ ರಫೀ ಜಾಫರ್ ಪಾಷಾರನ್ನು ಪೊಲೀಸರು ಹಿಡಿದಿದ್ದಾರೆ. ವಿಚಾರಣೆ ವೇಳೆ ಆ ಎಲ್ಲಾ ಜಾನುವಾರುಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಸಹ ಹೊಂದಿರದ ಕಾರಣ ಮಹಮದ್ ರಫೀ ಜಾಫರ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಸೈ ಸಿದ್ದಪ್ಪ ಗುಡಿ ಅವರು ತನಿಖೆ ನಡೆಸುತ್ತಿದ್ದಾರೆ. ಪಶು ವೈದ್ಯ ಸುಬ್ರಾಯ ಭಟ್ಟ ಅವರು ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅದಾದ ನಂತರ ಪೊಲೀಸರೇ ಅಗತ್ಯವಿರುವ ಹುಲ್ಲು-ನೀರು ನೀಡಿ ಜಾನುವಾರುಗಳ ಆರೈಕೆ ಮಾಡಿದ್ದಾರೆ.