ಸಮಾಜ ಸೇವೆಯ ಜೊತೆ ಶಿಕ್ಷಣ ಕ್ಷೇತ್ರದಲ್ಲಿಯೂ ತೊಟಗಿರುವ ಅಮದಳ್ಳಿ ಮೂಲದ ಉದ್ಯಮಿ ಪ್ರಸಾದ್ ಗಾಂವಕರ ಅವರು ಕ್ರೀಡಾ ಕ್ಷೇತ್ರದಲ್ಲಿಯೂ ಚಾಪು ಮೂಡಿಸಿದ್ದಾರೆ. ಸದ್ಯ ಬೈತಕೊಲ್ ಟ್ರಾಫಿಕಾನಾ ಟರ್ಮಿನಲ್ ಮ್ಯಾನೇಜರ್ ಆಗಿರುವ ಪ್ರಸಾದ್ ಗಾಂವಕರ ಅವರ ಮಾಲಕತ್ವದ ಮರಾಠಾ ವಾರಿಯರ್ಸ್ ತಂಡವೂ `ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್ – 2026′ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿರಾಕಾರ ಯೂತ್ ಕ್ಲಬ್ ಮಖೇರಿ ಹಾಗೂ ಮಲ್ಲಿಕಾರ್ಜುನ ಕ್ರಿಕೆಟರ್ಸ್ ಕಾರವಾರ ಅವರ ಆಯೋಜಕತ್ವದಲ್ಲಿ ಫೆಬ್ರವರಿ 28 ಹಾಗೂ ಮಾರ್ಚ್ 1ರಂದು ನಡೆದ ಕ್ರೀಡಾಕೂಟದಲ್ಲಿ ಮರಾಠಾ ವಾರಿಯರ್ಸ್ ತಂಡದವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಈ ಸಾಹಸಕ್ಕೆ 1 ಲಕ್ಷ ರೂ ಬಹುಮಾನದ ಜೊತೆ ಪಾರಿತೋಷಕದ ಗೆಲುವು ಸಿಕ್ಕಿದೆ. ಲೀಗ್ ಹಂತದಲ್ಲಿ ನಡೆದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಟೇಬಲ್ ಟಾಪರ್ ಆಗಿ ಹೊರಹೊಮ್ಮಿದ ಮರಾಠಾ ವಾರಿಯರ್ಸ್ ತಂಡವು ಕ್ವಾಲಿಫೈಯರ್ 1ರಲ್ಲಿ ಸೋಲು ಕಂಡರೂ ಹಿಂತಿರುಗದೆ ಕ್ವಾಲಿಫೈಯರ್ 2ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.
ಫೈನಲ್ನಲ್ಲಿ ವೀರ ಮರಾಠಾ ಬಾಳ್ನಿ ವಿರುದ್ಧ 5 ಓವರ್ಗಳ ರೋಚಕ ಪಂದ್ಯ ನಡೆಯಿತು. ಟಾಸ್ ಗೆದ್ದ ಮರಾಠಾ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡ 61 ರನ್ಗಳ ಗುರಿ ನೀಡಿತು. ಕೊನೆಯ ಓವರ್ ತನಕ ನಡೆದ ತೀವ್ರ ಪೈಪೋಟಿಯಲ್ಲಿ ಗುರಿ ಬೆನ್ನಟ್ಟಿದ ಮರಾಠಾ ವಾರಿಯರ್ಸ್ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್-ಅಪ್ ಸ್ಥಾನವನ್ನು ವೀರ ಮರಾಠಾ ಬಾಳ್ನಿ ಪಡೆದುಕೊಂಡಿತು. ತಂಡದ ಮಾಲೀಕರಾದ ಪ್ರಸಾದ್ ಗಾಂವಕರ (ಅಮದಳ್ಳಿ) ಹಾಗೂ ಕೋ-ಓನರ್ ಪ್ರಸಾದ್ ನಾಯ್ಕ (ಹಣಕೋಣ್) ಅವರು ಅಮದಳ್ಳಿಯ ಸುಧೀಪ್ ಸತೀಶ್ ಗಾವಂಕರ್ ಅವರನ್ನು ತಂಡದ ನಾಯಕನಾಗಿ ನೇಮಕ ಮಾಡಿದ್ದರು. ಇದು ಅವರು ಮರಾಠಾ ವಾರಿಯರ್ಸ್ ತಂಡದ ನಾಯಕತ್ವ ವಹಿಸಿದ ಮೂರನೇ ಬಾರಿ. ಈ ಮೂರೂ ಅವಧಿಗಳಲ್ಲಿ ಮೊದಲ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪ್ರಣಾಭ್ ರಾಣೆ ಅವರು ಮ್ಯಾನ್ ಆಫ್ ದ ಸಿರೀಸ್, ಮಂದಾರ ನಾಯಕ್ ಅವರು ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ (ಸಿಡಿಲು ಇನ್ನಿಂಗ್ಸ್) ಆಗಿ ವಿಶೇಷ ಸಾಧನೆ ಮಾಡಿದರು. ಈ ಇಬ್ಬರು ಆಟಗಾರರೂ ಮರಾಠಾ ವಾರಿಯರ್ಸ್ ತಂಡದವರೇ ಎಂಬುದು ಇಲ್ಲಿನ ವಿಶೇಷ. ತಂಡದ ಆಟಗಾರರಾದ ಸುಧೀಪ್ ಗಾಂವಕರ, ವೈಭವ್ ಗಾಂವಕರ (ಅಮದಳ್ಳಿ), ಮಂದಾರ ನಾಯಕ್, ಸೋಮೇಶ್ ಗಾಂವಕರ, ಮಹೇಂದ್ರ ಗಾಂವಕರ, ಜಯೇಶ್ ರಾಣೆ, ರೋಷನ್ ದೇಸಾಯಿ, ಗೌತಮ್ ನಾಯ್ಕ (ಮಖೇರಿ), ಪ್ರಣಾಭ್ ರಾಣೆ (ಮುಡಗೇರಿ), ಸಾಯಿ ನಾಯ್ಕ (ನಂದಗದ್ದಾ), ಅಭಯ ನಾಯ್ಕ (ಸದಾಶಿವಗಡ), ಕಿರಣ್ ನಾಯ್ಕ (ಹಣಕೋಣ್) ಸೇರಿದಂತೆ ತಂಡವು ಒಗ್ಗಟ್ಟಿನ ಆಟ ಪ್ರದರ್ಶಿಸಿದರು. ಕಳೆದ ವರ್ಷ ತಂಡದ ಭಾಗವಾಗಿದ್ದ ರೂಪೇಶ್ ದಳವಿಯವರಿಗೆ ಅವರ ಅಮೂಲ್ಯ ಕೊಡುಗೆಗಾಗಿ ಮಾಲೀಕರಾದ ಪ್ರಸಾದ್ ಗಾಂವಕರ ಅವರು ಕೃತಜ್ಞತೆ ಸಲ್ಲಿಸಿದರು.
ಮರಾಠಾ ವಾರಿಯರ್ಸ್ ತಂಡವು ಕಳೆದ ವರ್ಷ ಅವರ್ಸಾ ಪ್ರಿಮಿಯರ್ ಲೀಗ್ 2025ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಿರಂತರ ಜಯಗಳಿಂದ ತಂಡದ ಮಟ್ಟ ಮತ್ತಷ್ಟು ಎತ್ತರಕ್ಕೇರಿದೆ. ಕೊಂಕಣ ಮರಾಠ ಸಮುದಾಯದಲ್ಲಿ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಪ್ರಸಾದ್ ಗಾಂವಕರ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದು, ಅವರು ಕ್ರೀಡಾಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಶಿಕ್ಷಣ ಪ್ರೇಮಿಯಾಗಿರುವ ಇವರು ಅಂಗನವಾಡಿ ಶಾಲೆಗಳಿಗೆ ಪರಿಕರಗಳ ವಿತರಣೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಆಶಾ ಕಾರ್ಯಕರ್ತೆಯರ ಸನ್ಮಾನ, ಅನಾರೋಗ್ಯದಲ್ಲಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಅವರು `ಇಂದಿನ ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ದೈಹಿಕವಾಗಿ ಸದೃಢರಾಗಬೇಕು ಹಾಗೂ ಸಮಾಜ ಸಂಘಟಿತವಾಗಬೇಕು’ ಎಂದು ಕರೆ ನೀಡಿದ್ದಾರೆ.