ವಿವಿಧ ಸಂಘಟನೆಗಳ ಸಕ್ರೀಯ ಸದಸ್ಯರಾಗಿರುವ ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಬೆದರಿಕೆ ಬಂದಿದೆ. ಈ ಹಿನ್ನಲೆ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
`ಹಿಂದೂ ಜಾಗರಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಗೋ ಪರಿವಾರ, ಬಿ ಎಸ್ ಎನ್ ಎಲ್ ಸಲಹಾ ಸಮಿತಿ ಜಿಲ್ಲಾ ಸದಸ್ಯ ಹಾಗೂ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ತಮ್ಮ ವಿರುದ್ಧ ಸಂಚು ನಡೆದಿದೆ’ ಎಂದು ಸೋಮೇಶ್ವರ ನಾಯ್ಕ ಅವರು ದೂರಿದ್ದಾರೆ. `23 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ತಮ್ಮ ಮನೆಯ ಗೇಟಿಗೆ ಫೆ 26ರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅದಾದ ನಂತರ ತಮ್ಮ ಸ್ಕೂಟರಿನ ಮೇಲೆ ಗುಟುಕಾ ಉಗುಳಿದ್ದಾರೆ’ ಎಂದು ಅವರು ಪೊಲೀಸರಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ಭೂ ಒತ್ತವರಿ ಕುರಿತು ಹೋರಾಟ, ಮರಳು ಮಾಫಿಯಾ ವಿರುದ್ಧ ಧ್ವನಿ, ಜೂಜಾಟದ ವಿರುದ್ಧ ಸಮರ ಹಾಗೂ ಗಾಂಜಾ ವ್ಯಸನಿಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ತಮ್ಮ ವಿರುದ್ಧ ಹಲ್ಲೆ ಪ್ರಯತ್ನ ನಡೆದಿದೆ. ಅಕ್ರಮ ಚಟುವಟಿಕೆ ತಡೆದ ಕಾರಣ ಅದನ್ನು ಸಹಿಸದವರು ಈ ಕೃತ್ಯ ಎಸಗುತ್ತಿದ್ದಾರೆ. ಫೆ 26ರಂದು ರಾತ್ರಿ 12.30ಕ್ಕೆ ಕೆಲ ಯುವಕರು ಗುಂಪಿನಲ್ಲಿ ಬಂದು ರವೀಂದ್ರ ನಗರದಲ್ಲಿ ಗಲಾಟೆ ಮಾಡಿದ್ದು ಅವರ ವಿರುದ್ಧವೂ ಕ್ರಮವಾಗಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಆಗ್ರಹಿಸಿದ್ದಾರೆ.
`ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆ ಸಹಿಸದೇ ಕೆಲವರು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸಂಚು ರೂಪಿಸಿದ್ದಾರೆ. ಈ ಹಿನ್ನಲೆ ರಕ್ಷಣೆ ಅಗತ್ಯ’ ಎಂದು ಕೋರಿ ಅವರು ಪೊಲೀಸರಿಗೆ ಲಿಖಿತ ಪತ್ರ ನೀಡಿದ್ದಾರೆ.