ಸರ್ಕಾರದ ಸೂಚನೆ ಪ್ರಕಾರ ಸಾಮಾಜಿಕ ಸಮೀಕ್ಷೆ ಮಾಡಿದ ಶಿಕ್ಷಕರಿಗೆ ಈವರೆಗೂ ಸೂಕ್ತ ಗೌರವಧನ ಪಾವತಿ ಆಗಿಲ್ಲ. ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಮನೆ ಮನೆ ಅಲೆದಾಟ ನಡೆಸಿ ಸರ್ಕಾರಕ್ಕೆ ಸಹಾಯ ಮಾಡಿದವರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ.
Advertisement. Scroll to continue reading.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಅಕ್ಟೋಬರ್ 22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ 431 ಲಕ್ಷ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿದ್ದರು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ಈ ಸಮೀಕ್ಷಾ ಕೆಲಸಕ್ಕೆ ನೇಮಿಸಲಾಗಿತ್ತು. 3923 ಶಿಕ್ಷಕರ ಜೊತೆ 236 ಇತರೆ ಇಲಾಖೆ ಸಿಬ್ಬಂದಿಯೂ ಮಾಹಿತಿ ಕಲೆ ಹಾಕುವ ಕೆಲಸದಲ್ಲಿ ತೊಡಗಿದ್ದರು. ಅವರಿಗೆ 5 ಸಾವಿರ ರೂ ಗೌರವಧನದ ಜೊತೆ ಪ್ರತಿ ಮನೆ ಭೇಟಿಗೂ ಪ್ರತ್ಯೇಕ ಗಣತಿ ವೆಚ್ಚ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ.
ಪ್ರತಿ ಗಣತಿದಾರರಿಗೆ 80ರಿಂದ 150 ಮನೆಗಳ ಸಮೀಕ್ಷೆ ಹಂಚಿಕೆ ಮಾಡಲಾಗಿದ್ದು, ಸಮೀಕ್ಷೆ ಮಾಡಿದ ಶಿಕ್ಷಕರಿಗೆ ಅಂದಾಜು 20 ಸಾವಿರ ರೂ ಪಾವತಿ ಆಗಬೇಕಿತ್ತು. ಆದರೆ, ಅದು ಎಲ್ಲಾ ಗಣತಿದಾರರ ಬ್ಯಾಂಕ್ ಖಾತೆಗೆ ಈವರೆಗೂ ಬಂದಿಲ್ಲ. ಕೆಲವರಿಗೆ ಮಾತ್ರ ಫೆಬ್ರವರಿ ತಿಂಗಳಲ್ಲಿ ಕೆಲ ಹಣ ಬಂದಿದ್ದು, ಅನೇಕರಿಗೆ ಬಾರದಿರುವ ಬಗ್ಗೆ ಆಕ್ಷೇಪವ್ಯಕ್ತವಾಗಿದೆ.
ಇನ್ನೂ ಸದ್ಯ ಪಾವತಿ ಆಗಿರುವ ಹಣದ ಬಗ್ಗೆಯೂ ಅಸಮಧಾನಗಳಿವೆ. ಗಣತಿ ಕಾರ್ಯ ಕೆಲಸದ ವಿಷಯವಾಗಿ 2 ಸದಸ್ಯರಿರುವ ಮನೆಗೆ ತಲಾ 50 ರೂ ಹಾಗೂ 3 ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳಿಗೆ ತಲಾ 100 ರೂ ಲೆಕ್ಕ ಹಾಕಿ ಗೌರವಧನ ನೀಡಲಾಗಿದೆ. ಆದರೆ, 10ರಿಂದ 15 ಸದಸ್ಯರಿದ್ದ ಮನೆಗಳಿಗೂ 100 ರೂ ಮಾತ್ರ ಪಾವತಿಸಿರುವುದಕ್ಕೆ ಗಣತಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಡಿದ ಕೆಲಸಕ್ಕೂ ಪಾವತಿಸಿದ ಹಣಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಇನ್ನೊಂದು ದೂರು.