`ಶರಾವತಿ ಉಳಿಸಿ’ ಆಂದೋಲನಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕೈ ಜೋಡಿಸಿದ್ದಾರೆ. `ಪೃಕೃತಿಗೆ ವಿರುದ್ಧವಾಗಿ ಮಾಡುವ ಯಾವ ಯೋಜನೆಯನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
Advertisement. Scroll to continue reading.
ಮಂಗಳವಾರ ಹೊನ್ನಾವರದಲ್ಲಿ ಶರಾವತಿ ಪಂಪ್ಡ ಸ್ಟೋರೇಜ್ ಭೂಗತ ವಿದ್ಯುತ ಯೋಜನೆಯ ವಿರುದ್ಧ ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜನರು ಸೌಮ್ಯ ಸ್ವಭಾವದವರಾಗಿದ್ದು, ಪೃಕೃತಿಗೆ ವಿರುದ್ಧವಾಗಿ ಯೋಜನೆ ರೂಪಿಸಿದರೆ ಸುಮ್ಮನಿರುವುದಿಲ್ಲ. ಸಂಘಟಿತ ಹೋರಾಟಗಳಿಗೆ ತನ್ನ ಬೆಂಬಲ ಸದಾ ಇದೆ’ ಎಂದು ಅವರು ಹೇಳಿದ್ದಾರೆ. ಈ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಮಿತಿಯವರು ಹಕ್ಕೊತ್ತಾಯ ಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ವೇಳೆ `ಎಲ್ಲ ಜೀವಿಗಳಿಗೆ ಹಾಗೂ ಮುಂದಿನ ತಲೆಮಾರಿಗೆ ಪೃಕೃಯಲ್ಲಿ ಜೀವಿಸುವ ಹಕ್ಕಿದೆ. ಜೀವನೀಡಿದ ಶರಾವತಿ ಶೋಷಣೆ ಮಾಡುವುದು ತಾಯಿಯ ರಕ್ತ ಕುಡಿದ ಪಾಪಕ್ಕೆ ಸಮಾನ. ರಾಜಕಾರಣಿಗಳು ಹಾಗೂ ಮಠಾದೀಶರು ಒಗ್ಗಟ್ಟಾಗಿ ಪರಿಸರ ನಾಶಕ್ಕೆ ಕಾರಣವಾಗುವ ಈ ಯೋಜನೆ ವಿರುದ್ಧ ಹೋರಾಡೋಣ’ ಎಂದು ರಾಘವೇಶ್ವರ ಶ್ರೀಗಳು ಕರೆನೀಡಿದರು.
`ಶರಾವತಿ ಕೊಳ್ಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯನ್ನು ಕೂಡಲೇ ಕೈಬಿಡಬೇಕು. ವಿದ್ಯುತ್ ಕೊರತೆಯನ್ನು ನೀಗಿಸಲು ಬೇರೆ ಬದಲೀ ಸುರಕ್ಷಿತ ಇಂದನ ಮೂಲಗಳ ಮೋರೆ ಹೋಗಬೇಕು. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಜನರನ್ನು ಅತಂತ್ರಸ್ತರನ್ನಾಗಿಸುವ ಪರಿಸರ ನಾಶಮಾಡುವ ಯಾವುದೇ ಯೋಜನೆಯ ಹೇರಿಕೆ ಮಾಡಬಾರದು. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯುವಕರಿಗೆ ಉದ್ಯೋಗ ಕಲ್ಪಿಸುವ ಐಟಿ ಹಬ್ ಸ್ಥಾಪನೆ, ಸ್ವಚ್ಛ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು’ ಎಂದು ಈ ಸಭೆಯಲ್ಲಿ ಆಗ್ರಹಿಸಲಾಗಿದೆ.
ಉಸ್ತುವಾರಿ ಸಚಿವ ಮಂಕಾಳವೈದ್ಯ ಮಾತನಾಡಿ `ಪಂಪ್ಡ ಸ್ಟೋರೇಜ ಯೋಜನೆಯು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮಂಜೂರಾಗಿದ್ದು ಅಂದೇ ತಾವು ಈ ಯೋಜನೆಯನ್ನು ತನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ವಿರೋಧಿಸಿದ್ದೇನೆ’ ಎಂದರು. `ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟ ಸಮಿತಿಯ ಮತ್ತು ಜನರ ಬೆಂಬಲಕ್ಕೆ ತಾನು ನಿಲ್ಲುವೆ’ ಎಂದು ಘೋಷಿಸಿದರು. ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ, ಪ್ರಣವಾನಂದ ಸ್ವಾಮೀಜಿ, ಶಾಸಕ ದಿನಕರ ಶೆಟ್ಟಿ ಸೇರಿ ಅನೇಕರು ಸಭೆಯಲ್ಲಿದ್ದರು. ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಜೆ ಟಿ ಪೈ, ವೆಂಕಟರಮಣ ಹೆಗಡೆ ಕವಲಕ್ಕಿ, ಕಾರ್ಯಾಧ್ಯಕ್ಷ ಚಂದ್ರಕಾoತ ಕೊಚರೇಕರ, ಕ್ರಾಂತಿರoಗದ ಅಧ್ಯಕ್ಷ ಮಂಗಲದಾಸ ನಾಯ್ಕ, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಜಯ ಕಾಮತ ಇತರರು ಕಾರ್ಯಕ್ರಮ ಸಂಘಟಿಸಿದ್ದರು.