ಅನ್ನ ಮಾಡುವುದಕ್ಕಾಗಿ ಬಿಸಿ ನೀರು ಕಾಯಿಸುತ್ತಿದ್ದ ವೃದ್ಧೆಯೊಬ್ಬರು ಅದೇ ಬಿಸಿ ನೀರು ಮೈಮೇಲೆ ಬಿದ್ದ ಪರಿಣಾಮ ಸಾವನಪ್ಪಿದ್ದಾರೆ. ಕೈ-ಮೈ ಸುಟ್ಟುಕೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿದರೂ ಅದರಿಂದ ಪ್ರಯೋಜನವಾಗಲಿಲ್ಲ.
ಕುಮಟಾ ತಾಲೂಕಿನ ತದಡಿ ಬಳಿ ಚಂದ್ರಮತಿ ಶೇಷು ನಾಯ್ಕ ಅವರು ವಾಸವಾಗಿದ್ದರು. 80 ವರ್ಷ ವಯಸ್ಸಿನ ಅವರು ನಿತ್ಯ ಬೆಳಗ್ಗೆ ಅನ್ನ ಮಾಡಿ ಊಟ ಮಾಡುತ್ತಿದ್ದರು. ಅದರಂತೆ ಫೆಬ್ರವರಿ 21ರ ಬೆಳಗ್ಗೆಯೂ ಅವರು ಅನ್ನ ಮಾಡಲು ಬಿಸಿ ನೀರು ಕಾಯಿಸಿದ್ದರು. ಆದರೆ, ಆ ಬಿಸಿ ನೀರಿನ ಪಾತ್ರೆ ಕೈ ತಪ್ಪಿ ಅವರ ಮೈಮೇಲೆ ಬಿದ್ದಿತು. ಅದರ ಪರಿಣಾಮ ಚಂದ್ರಮತಿ ನಾಯ್ಕ ಅವರ ಎದೆ, ಹೊಟ್ಟೆ, ಕಾಲು, ತೊಡೆ ಭಾಗ ಸುಟ್ಟಿತು.
ಚಂದ್ರಮತಿ ನಾಯ್ಕ ಅವರು ನಿವೃತ್ತ ಕೃಷಿ ಅಧಿಕಾರಿ ಲಕ್ಷಣ ನಾಯ್ಕ ಅವರ ತಾಯಿಯಾಗಿದ್ದು, ಕುಟುಂಬದವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಭಟ್ಕಳದ ಕಾಯ್ಕಿಣಿ ಬಸ್ತಿಯ ಬದ್ರಾಮನೆಯಲ್ಲಿ ವಾಸವಾಗಿರುವ ಲಕ್ಷಣ ನಾಯ್ಕ ಅವರು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಂದ್ರಮತಿ ನಾಯ್ಕ ಅವರಿಗೆ ಚಿಕಿತ್ಸೆ ಕೊಡಿಸಿದರು. ಸಾಕಷ್ಟು ದಿನಗಳ ಕಾಲ ಆರೈಕೆ ಮಾಡಿದರೂ ಚಂದ್ರಮತಿ ನಾಯ್ಕ ಅವರು ಚೇತರಿಸಿಕೊಳ್ಳಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದರು. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದರು.
`ನಿತ್ಯದ ಕೆಲಸ ಮಾಡುವಾಗ ಎಚ್ಚರಿಕೆವಹಿಸಿ’