ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಪೊಲೀಸರು ದಾಳಿ ಮಾಡಿದ್ದು, ಒಂದೇ ದಿನ ರಾಶಿ ರಾಶಿ ಪ್ರಮಾಣದಲ್ಲಿ ಬಾಲ್ ಪೆನ್ನುಗಳು ಸಿಕ್ಕಿವೆ. ಆ ಬಾಲ್ ಪೆನ್ನುಗಳ ಜೊತೆ ಅಂಕಿ-ಸoಖ್ಯೆ ಬರೆದ ಚೀಟಿ ಹಾಗೂ ಒಂದಷ್ಟು ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಮುಂಡಗೋಡ ಪಿಸೈ ಮಂಜುನಾಥ ಗೌಡರ್ ಅವರು ಫೆ 11ರಂದು ಎರಡು ಕಡೆ ದಾಳಿ ಮಾಡಿದ್ದಾರೆ. ಮಳಗಿ ಮೂಲದ ಹೊಟೇಲ್ ವ್ಯಾಪಾರಿ, ಸದ್ಯ ಕಾತೂರಿನಲ್ಲಿರುವ ಹಜರತ್ ಅಲಿ ಮಟ್ಕಾ ಆಟದಲ್ಲಿ ತಲ್ಲೀನರಾಗಿರುವುದು ಈ ವೇಳೆ ಗೊತ್ತಾಗಿದೆ. ಆಲಳ್ಳಿ ಕ್ರಾಸಿನ ಬಳಿ ರಸ್ತೆ ಮೇಲೆ ನಿಂತು 1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣಪಡೆಯುತ್ತಿದ್ದ ವ್ಯಾಪಾರಿ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಹಜರತ್ ಅಲಿ ಅವರ ಬಳಿಯಿದ್ದ 1150ರೂ ಹಣ, ಮಟ್ಕಾ ಬರೆದ ಚೀಟಿ ಜೊತೆ ಒಂದು ಬಾಲ್ ಪೆನ್ ಜಪ್ತು ಮಾಡಿದ್ದಾರೆ.
ಮುಂಡಗೋಡ ನಂದಿಪುರದ ಸಯ್ಯದ್ ಪೀರ್ ಸಯ್ಯದ್ ಸಾಬ್ ಹರಬಿ ಅವರು ಸಹ ಮಟ್ಕಾ ಆಟ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ನಾಗನೂರು ಕ್ರಾಸಿನ ಬಳಿ ಅಂಕಿ-ಸAಖ್ಯೆ ಆಟ ಆಡಿಸುತ್ತಿದ್ದಾಗ ಪಿಸೈ ಬಸವರಾಜ ಮಬನೂರು ಅವರು ದಾಳಿ ಮಾಡಿದ್ದು, ಸಯ್ಯದ್ ಪೀರ್ ಸಯ್ಯದ್ ಸಾಬ್ ಅವರ ಬಳಿಯಿದ್ದ 650ರೂ ಹಣ, ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆಪಡೆದಿದ್ದಾರೆ.
ಸಿದ್ದಾಪುರ ಪಿಸೈ ಶಾಂತಿನಾಥ ಪಾಸಾನೆ ಅವರು ಹೆಗ್ಗರಣಿಯ ಕೂಲಿ ಕಾರ್ಮಿಕ ವೀರೇಂದ್ರ ಚಿನ್ನು ಗೌಡ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಗೌಡರು ಹೆಗ್ಗರಣಿ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುವುದು ಗೊತ್ತಾಗಿದೆ. ಅವರು ಜೂಜಾಟದಿಂದ ಸಂಗ್ರಹಿಸಿದ್ದ 370ರೂ, ಚೀಟಿ ಹಾಗೂ ಬಾಲ್ ಪೆನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಶಿರಸಿ ನಗರ ಠಾಣೆ ವ್ಯಾಪ್ತಿಯಲ್ಲಿಯೂ ಮಟ್ಕಾ ಆಟ ನಡೆದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಿಸೈ ನಾರಾಯಣ ರಾಥೋಡ್ ಅವರು ದಾಳಿ ಮಾಡಿದ್ದಾರೆ. ಗಣೇಶ ನಗರದಲ್ಲಿ ಗಾರೆ ಕೆಲಸ ಮಾಡುವ ಸಂತೋಷ ಹನುಮಂತಪ್ಪ ಬೋವಿವಡ್ಡರ್ ಅವರು ಜೂಜಾಟ ನಡೆಸುವಾಗ ಸಿಕ್ಕಿ ಬಿದ್ದಿದ್ದಾರೆ. ಹೊಸ ಬಸ್ ನಿಲ್ದಾಣದ ಒಳಗೆ ಬರುವ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದ ಅವರನ್ನು ವಿಚಾರಿಸಿದಾಗ ಸಂಗ್ರಹಿಸಿದ್ದ 500ರೂ ಹಣ ಸಿಕ್ಕಿದೆ. ಅಲ್ಲಿಯೂ ಪೊಲೀಸರು ಚೀಟಿ ಜೊತೆ ಬಾಲ್ ಪೆನ್ನು ವಶಕ್ಕೆಪಡೆದಿದ್ದಾರೆ.
ಮಟ್ಕಾ ಆಡಲು ಹೋದವ ಸಿಕ್ಕಿಬಿದ್ದ!
ಹಳಿಯಾಳ ಪಿಸೈ ಬಸವರಾಜ ಮಬನೂರು ಅವರು ತೆರಗಾವಿನ ರವಿಚಂದ್ರ ಭಾಗಪ್ಪ ಕಾಗೇರ್ ಅವರು ಮಟ್ಕಾ ಆಡಿಸುವುದನ್ನು ಪತ್ತೆ ಮಾಡಿದ್ದಾರೆ. ಬಸ್ ನಿಲ್ದಾಣದ ಬಳಿ ಅವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 420ರೂ ಹಣ ಹಾಗೂ ಬಾಲ್ ಪೆನ್ ಸಿಕ್ಕಿದೆ. ಖಾಜಿ ಗಲ್ಲಿಯ ಫರಾನ್ ಅಸ್ರಪ್ ಮುಗದ್ ಅವರು ಮಟ್ಕಾ ಆಡಲು ಹಣ ವೆಚ್ಚ ಮಾಡಿದ್ದು, ಅವರನ್ನು ಪೊಲೀಸರು ಹಿಡಿದಿದ್ದಾರೆ. ಆಗ, ಆನೆಗುಂದಿ ಪ್ಲಾಟಿನ ಪ್ರದೀಪ ಗೋಪಾಲ ಶೆಟ್ಟಿ ಅವರು ಮಟ್ಕಾ ಆಡಿಸುವುದಾಗಿ ಫರಾನ್ ಅಸ್ರಪ್ ಮುಗದ್ ಅವರು ಬಾಯ್ಬಿಟ್ಟಿದ್ದಾರೆ. ಬಸ್ ನಿಲ್ದಾಣದ ಬಳಿ ಜೂಜಾಡಿಸುತ್ತಿದ್ದ ಪ್ರದೀಪ ಶೆಟ್ಟಿ ಅವರ ಮೇಲೆ ದಾಳಿ ಮಾಡಿದಾಗ 590ರೂ ಹಣ, ಮಟ್ಕಾ ಚೀಟಿ ಜೊತೆ ಬಾಲ್ ಪೆನ್ ಸಿಕ್ಕಿದೆ. ಈ ವೇಳೆ ಆ ಎಲ್ಲಾ ಹಣವನ್ನು ಮಟ್ಕಾ ಬುಕ್ಕಿಯಾಗಿರುವ ಭಜಂತ್ರಿ ಗಲ್ಲಿಯ ಮಂಜುನಾಥ ಹನುಮಂತ ಕೋಳಿಪುಚ್ಚ ಅವರಿಗೆ ಕೊಡುವುದಾಗಿ ಪ್ರದೀಪ ಶೆಟ್ಟಿ ಅವರು ಹೇಳಿದ್ದಾರೆ.
`ಜೂಜಾಟದಿಂದ ಜೀವನ ಹಾಳು’