ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಬೈಕಿಗೆ ಲಾರಿ ಗುದ್ದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ್ದು, ಸಹ ಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಅoಕೋಲಾ ತಾಲೂಕಿನ ಹಳವಳ್ಳಿಯಲ್ಲಿ ದೇವೇಂದ್ರ ಸೀತಾರಾಮ ಗೌಡ (21) ಅವರು ವಾಸವಾಗಿದ್ದರು. ಕಾರ್ಪರೆಂಟರ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಮಾರ್ಚ 19ರ ರಾತ್ರಿ ದೇವೇಂದ್ರ ಗೌಡ ಅವರು ಯಲ್ಲಾಪುರದ ಕಳಚೆಯ ವಿಜೇತ ಪ್ರೇಮಾನಂದ ಗೌಡ (20) ಅವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ದೇವೇಂದ್ರ ಗೌಡ ಅವರು ಬೈಕ್ ಓಡಿಸುತ್ತಿದ್ದು, ವಿಜೇತ ಗೌಡ ಅವರು ಹಿಂದೆ ಕುಳಿತಿದ್ದರು. ಆ ಬೈಕು ಯಲ್ಲಾಪುರದಿಂದ ಅಂಕೋಲಾ ಕಡೆ ಸಂಚರಿಸುವಾಗ ಮಾಗೋಡು ತಿರುವಿನ ಬಳಿಯ ಪುರನಜಡ್ಡಿ ಕ್ರಾಸಿನ ಬಳಿ ಅಪಘಾತಕ್ಕೀಡಾಯಿತು.
ಅಂಕೋಲಾದಿAದ ಯಲ್ಲಾಪುರದ ಕಡೆ ಹೊರಟಿದ್ದ ಲಾರಿಯೊಂದು ವೇಗವಾಗಿ ಬಂದಿದ್ದು, ದೇವೇಂದ್ರ ಗೌಡ ಹಾಗೂ ವಿಜೇತ ಗೌಡ ಅವರು ಸಂಚರಿಸುತ್ತಿದ್ದ ಬೈಕಿಗೆ ಎದುರಿನಿಂದ ಗುದ್ದಿತು. ಅಪಘಾತದ ಬಗ್ಗೆ ಅರಿವಾದರೂ ಲಾರಿ ಚಾಲಕ ವಾಹನ ನಿಲ್ಲಿಸಲಿಲ್ಲ. ಗಾಯಗೊಂಡು ನರಳಾಡುತ್ತಿದ್ದ ಬೈಕ್ ಸವಾರರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ಕೊಡಲಿಲ್ಲ. ಅಪಘಾತದ ನಂತರ ಲಾರಿ ಚಾಲಕ ಆಂಬುಲೆನ್ಸಿಗೆ ಫೋನ್ ಮಾಡಿದರೂ ದೇವೇಂದ್ರ ಗೌಡ ಅವರು ಬದುಕುವ ಸಾಧ್ಯತೆಯಿತ್ತು. ಆದರೆ, ಲಾರಿ ಚಾಲಕ ಅದನ್ನು ಸಹ ಮಾಡಲಿಲ್ಲ. ಇನ್ನಷ್ಟು ವೇಗವಾಗಿ ಆ ಚಾಲಕ ಲಾರಿ ಓಡಿಸಿಕೊಂಡು ಹೋಗಿ ಪರಾರಿಯಾಗಿದ್ದು, ಕೆನ್ನೆಯಿಂದ ಕಿವಿಯವರೆಗೂ ಮಾಂಸ ಹೊರಗೆ ಬಂದು ಗಾಯಗೊಂಡಿದ್ದ ದೇವೇಂದ್ರ ಗೌಡ ಅವರು ಅಲ್ಲಿಯೇ ಕೊನೆಯುಸಿರೆಳೆದರು.
ಆ ಬೈಕಿನಲ್ಲಿ ಹಿಂದೆ ಕೂತಿದ್ದ ವಿಜೇತ ಗೌಡ ಅವರು ಸಹ ಈ ಅಪಘಾತದಿಂದ ನೋವು ಅನುಭವಿಸಿದರು. ವಿಜೇತ ಗೌಡ ಅವರ ತೊಡೆಯ ಭಾಗಕ್ಕೆ ಗಾಯವಾಗಿದ್ದು, ಅವರು ಚಿಕಿತ್ಸೆಪಡೆಯುತ್ತಿದ್ದಾರೆ. ಅಪಘಾತದ ಬಗ್ಗೆ ದೇವೇಂದ್ರ ಗೌಡ ಅವರ ಸಹೋದರ ಗಿರೀಶ ಗೌಡ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಅತಿ ವೇಗ ಅಪಘಾತಕ್ಕೆ ಕಾರಣವಾಗಿದ್ದು, ಮಾನವೀಯತೆ ಮರೆತ ಲಾರಿ ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
`
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’