ಕದ್ರಾ ಅಣೆಕಟ್ಟು ಜಲಾಶಯದಿಂದ ಹೊರಹೊಮ್ಮಿದ ನೀರಿನಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾದವರಿಗೆ ಐದು ವರ್ಷ ಕಳೆದರೂ ಯೋಗ್ಯ ಪರಿಹಾರ ಸಿಕ್ಕಿಲ್ಲ. ಇದರಿಂದ ಆ ಭಾಗದ 25 ಫಲಾನುಭವಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.
2020ರ ಅವಧಿಯಲ್ಲಿ ಕದ್ರಾ ಅಣೆಕಟ್ಟು ಭದ್ರತೆ ದೃಷ್ಠಿಯಿಂದ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಅದರೊಂದಿಗೆ ಸುರಿದ ಧಾರಾಕಾರ ಮಳೆ ಆ ಭಾಗದ ಜನರನ್ನು ಸಂಪೂರ್ಣವಾಗಿ ಸಂತ್ರಸ್ತರನ್ನಾಗಿಸಿತು. ವೈಲವಾಡದ 10 ಮನೆ, ಕಿನ್ನರದ 12 ಮನೆಗಳ ಜೊತೆ ಮಲ್ಲಾಪುರದ 3 ಮನೆಗಳು ನೀರಿನಲ್ಲಿ ಮುಳುಗಿದವು. ಆ ಮನೆಯಲ್ಲಿದ್ದವರು ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದು, ನಂತರ ಬಂಧು-ಮಿತ್ರರ ಮನೆಗೆ ಹೋಗಿದ್ದರು. ಆ ವೇಳೆ ಜನರಿಗೆ ತುರ್ತು ಪರಿಹಾರ ನೀಡಿದಾದರೂ ಮನೆ ನಿರ್ಮಾಣಕ್ಕೆ ಸಹಾಯ ಸಿಗಲಿಲ್ಲ.
ಸಂತ್ರಸ್ತರು ವಿವಿಧ ಕಚೇರಿ ಓಡಾಟದ ನಂತರ ಅವರಿಗೆ ಮನೆ ನಿರ್ಮಾಣಕ್ಕೆ ಮೊದಲ ಕಂತಿನ ಪರಿಹಾರ ಸಿಕ್ಕಿತು. ಆದರೆ, ಅಪೂರ್ಣಗೊಂಡ ಮನೆ ಪೂರ್ಣಗೊಳಿಸಲು ಅಗತ್ಯವಿರುವ ಮುಂದಿನ ಪರಿಹಾರ ಈವರೆಗೂ ಬಂದಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಸಂತ್ರಸ್ತರು ಅಲ್ಲಿಯೇ ಪುಟ್ಟ ಪುಟ್ಟ ಜೋಪಡಿ ನಿರ್ಮಿಸಿ ವಾಸಿಸುತ್ತಿದ್ದಾರೆ. ಅವರಿಗೆ ಯೋಗ್ಯ ಪರಿಹಾರ ಕೊಡಿಸಬೇಕು ಎಂದು ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಪ್ರಶಾಂತ ಗೋವೇಕರ್ ಅವರು ಭೇಟಿ ಮಾಡಿದ್ದು, ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.
`ಇನ್ನೆರಡು ತಿಂಗಳಿನಲ್ಲಿ ಮಳೆಗಾಲ ಶುರುವಾಗುವ ಹಾಗಿದೆ. ಹೀಗಾಗಿ, ಅಲ್ಲಿನ ಸಂತ್ರಸ್ತರು ಇನ್ನಷ್ಟು ಆತಂಕದಲ್ಲಿದ್ದು, ಕೂಡಲೇ ಅವರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಪ್ರಶಾಂತ ಗೋವೇಕರ್ ಅವರು ಆಗ್ರಹಿಸಿದ್ದಾರೆ. `ಮಳೆ ಪ್ರವಾಹದಿಂದ ಹಾನಿಗೊಳಗಾದವರಿಗೆ ಪರಿಹಾರ ಕೊಡುವ ವಿಷಯದಲ್ಲಿ ಸಿ ವರ್ಗದಿಂದ ಎ ಮತ್ತು ಬಿ ವರ್ಗಕ್ಕೆ ಬದಲಾವಣೆ ಮಾಡಲಾಗಿದೆ. ಆದರೆ, ಮನೆಗಳಿಗೆ ಜಿಪಿಎಸ್ ಮಾಡಲು ಅನುಮತಿ ಸಿಕ್ಕಿಲ್ಲ. ರಾಜೀವಗಾಂಧಿ ನಿಗಮದಿಂದ ಸಂಪೂರ್ಣ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು’ ಎಂದವರು ಮನವಿ ಮಾಡಿದ್ದಾರೆ. 15 ದಿನದಲ್ಲಿ ಸಮಸ್ಯೆ ಬಗೆಹರಿಯೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.