ಕಾರವಾರ ನಗರದ ಬಾಡದ ಚಂದ್ರಾದೇವಿ ಕ್ರಿಕೆಟ್ ಮೈದಾನದಲ್ಲಿ ಮಾರ್ಚ 25ರಿಂದ 29ರವರೆಗೆ `ಪಡ್ತಿ ಸಮಾಜ ಪ್ರೀಮಿಯರ್ ಲೀಗ್ ಸೀಸನ್-3’ರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಪಡ್ತಿ ಸಮಾಜ ಪ್ರೀಮಿಯರ್ ಲೀಗ್ ಸಮಿತಿ ಹಾಗೂ ಸಹ ಆಯೋಜಕರಾದ ಚಂದ್ರಾದೇವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಎನ್ ಬಿ ಸಿ ಸ್ಪೋರ್ಟ್ಸ್ ಕ್ಲಬ್ ಹಿರೇಶಿಟ್ಟಾದ ಜಂಟಿ ಆಶ್ರಯದಲ್ಲಿ ಈ ಟೂರ್ನಿ ನಡೆಯಲಿದೆ.
ಮಾರ್ಚ 25ರಂದು ಬೆಳಿಗ್ಗೆ 9:15ಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಈ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕಳೆದ ಎರಡು ವರ್ಷಗಳಿಂದ 6 ತಂಡಗಳೊAದಿಗೆ ಯಶಸ್ವಿಯಾಗಿ ನಡೆಯುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ ಒಟ್ಟು 10 ತಂಡಗಳು ಸೆಣಸಾಡಲಿವೆ. ಮಾರ್ಚ್ 1ರಂದು ನಡೆದ ಐಪಿಎಲ್ ಮಾದರಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 225 ಆಟಗಾರರು ಭಾಗವಹಿಸಿದ್ದು, ಪ್ರತಿ ತಂಡಕ್ಕೆ ಇಬ್ಬರು ಐಕಾನ್ ಪ್ಲೇಯರ್ಸ್ ಸೇರಿದಂತೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅನಿಲ್ ಗಾಂವಕರ, ಮಹೇಶ ಗಾಂವಕರ, ಅಮಿತ್ ತಳೇಕರ್ ಹಾಗೂ ಸಂದೀಪ ಕಂತ್ರೇಕರ್ ಅವರು 13,500 ರೂಪಾಯಿಗೆ ಹರಾಜಾಗಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಆಯೋಜಕ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
`ಅಮ್ಚೆ ಸೂಪರ್ ಕಿಂಗ್ಸ್ ಅಮದಳ್ಳಿ, ಅಸ್ನೋಟಿ ಟೈಗರ್ಸ್ ಅಸ್ನೋಟಿ, ಚಂದ್ರಾದೇವಿ ಟೈಗರ್ಸ್ ಬಾಡ, ಚೆಂಡ್ಯಾ ಚಾಲೆಂಜರ್ಸ್ ಚೆಂಡಿಯಾ, ಎನ್ ಬಿ ಸಿ ಹಿರೇಶಿಟ್ಟಾ, ಓಂ ಸಾಯಿ ಹಳಗೇಜೂಗ್, ರಾಮ ಬೇತಾಳ ವಾರಿಯರ್ಸ್ ಮಾಜಾಳಿ, ರಾಮಸಾಥಿ ಚಾಂಪಿಯನ್ ಬ್ಲಾಸ್ಟರ್ಸ್ ಮಕೇರಿ, ಸೂಪರ್ ಸ್ಟ್ರೈಕರ್ಸ್ ಪೂಜಗೇರಿ ಅಂಕೋಲಾ ಹಾಗೂ ಯಂಗ್ ಚಾಣಕ್ಯ ಕಡವಾಡ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ’ ಎಂದವರು ಮಾಹಿತಿ ನೀಡಿದ್ದಾರೆ. ಬಹುಮಾನದ ಕುರಿತು ಮಾಹಿತಿ ನೀಡಿದ ಸದಸ್ಯ ನರೇಂದ್ರ ತಳೇಕರ್ ಅವರು `ವಿಜೇತ ಪ್ರಥಮ ತಂಡಕ್ಕೆ 2 ಲಕ್ಷ ರೂ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗಳಿಗೆ 1ಲಕ್ಷ ರೂ ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ ಮತ್ತು ಟ್ರೋಫಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ’ ಎಂದರು. `ಇದರ ಜೊತೆಗೆ ಅತ್ಯುತ್ತಮ ಬೌಲರ್, ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುತ್ತದೆ. ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸೀಸನ್ 1ರಿಂದಲೂ ಈ ಟೂರ್ನಿಗೆ ನಿರಂತರ ಬೆಂಬಲ ಹಾಗೂ ಸಹಕಾರ ನೀಡುತ್ತಾ ಬಂದಿದ್ದಾರೆ’ ಎಂದು ವಿವರಿಸಿದರು. `ಕ್ರಿಕೆಟ್ ಪ್ರೇಮಿಗಳಿಗಾಗಿ ಈ ರೋಚಕ ಪಂದ್ಯಾವಳಿಯ ನೇರಪ್ರಸಾರ ರಾಜ್ಯಾದ್ಯಂತ ಲಭ್ಯವಿರಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಂಡದ ಮಾಲೀಕರು ಹಾಗೂ ಐಕಾನ್ ಆಟಗಾರರ ಸಮ್ಮುಖದಲ್ಲಿ ಟೂರ್ನಿಯ ತಂಡಗಳ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷರಾದ ಮೋಹನ್ ಕೊಚರೇಕರ್, ಪ್ರದೀಪ ಗೋವೇಕರ್, ಕಾರ್ಯದರ್ಶಿ ಉಲ್ಲಾಸ್ ನಾಗೇಕರ್ ಹಾಗೂ ಪ್ರಮುಖರಾದ ಪ್ರಶಾಂತ ತಳೇಕರ್, ನರೇಂದ್ರ ತಳೇಕರ್, ಸಂತೋಷ ಟಕ್ಕರಕರ್, ಗಿರೀಶ ಕೊಠಾರಕರ್, ಸಂತೋಷ ಪಂಜುಲೇಕರ್ ಮತ್ತು ಉಲ್ಲಾಸ್ ತಳೇಕರ್ ಮುಂತಾದವರು ಉಪಸ್ಥಿತರಿದ್ದರು.