ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಮದುವೆ-ಮುಂಜಿ ಕಾರ್ಯಕ್ರಮಗಳು ಹೆಚ್ಚಾಗಿದ್ದು, ವಿಪರೀತ ಪ್ರಮಾಣದಲ್ಲಿ ತಿರುಗಾಟ ನಡೆಸುವ ಅನೇಕರಲ್ಲಿ ಹೊಟ್ಟೆನೋವು-ವಾಂತಿ-ಭೇದಿ ಸಮಸ್ಯೆ ಕಾಣಿಸುತ್ತಿದೆ. ಬಹುತೇಕ ಜನ ದಿನವೀಡಿ ಆರೋಗ್ಯವಾಗಿದ್ದರೂ ರಾತ್ರಿ ವೇಳೆ ಇದ್ದಕ್ಕಿದ್ದ ಹಾಗೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ವ್ಯಾಪಕವಾದ ಬಿಸಿಲು, ಆಗಾಗ ಬೀಳುವ ಮಳೆ, ಶುಚಿತ್ವದ ಕೊರತೆ, ದಿನವಡೀ ದುಡಿದ ಆಯಾಸ, ಅತಿಯಾದ ತಿರುಗಾಟ ಹಾಗೂ ಆಹಾರ ಸೇವನೆಯಲ್ಲಿನ ವ್ಯತ್ಯಾಸ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಬಿಸಿಲಿನಲ್ಲಿ ಓಡಾಟ, ಮಳೆಯಲ್ಲಿ ನೆನೆದವರ ಜೊತೆ ಮದುವೆ-ಮುಂಜಿ ಎಂದು ತಿರುಗಾಟ ನಡೆಸಿದ ಬಹುತೇಕರ ಮನೆಯ ಸದಸ್ಯರು ಇಂಥ ಸಮಸ್ಯೆಗೆ ಬಳಲಿದ್ದಾರೆ. `ಆಪ್ತರ ಮನೆಯ ಮದುವೆ-ಮುಂಜಿಗಳಲ್ಲಿ ಭಾಗವಹಿಸದೇ ವಿಧಿ ಇಲ್ಲ. ಅಲ್ಲಿನ ಊಟ ಮಾಡಿದ ನಂತರ ಆಸ್ಪತ್ರೆ ಓಡಾಟ ತಪ್ಪಿದ್ದಲ್ಲ’ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬಂದಿವೆ. ಹೊಟ್ಟೆ ತೊಳಸಿದಂತಾಗುವಿಕೆ, ಆಗಾಗ ವಾಂತಿಯ ಲಕ್ಷಣಗಳಿಂದ ಮಕ್ಕಳು, ವೃದ್ಧರು ಸಹ ಆಯಾಸಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ವೈದ್ಯರಿದ್ದು, ನಿತ್ಯ ಸಾವಿರಾರು ಜನರಿಗೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಾಂತಿ-ಭೇದಿ ಸಮಸ್ಯೆಯಿಂದ ಬಳಲುವವರಿಗೆ ಅವರು ಔಷಧಿ ನೀಡುವುದರಲ್ಲಿ ನಿರತರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಕ್ಲಿನಿಕ್ಗೆ ಬರುವ ರೋಗಿಗಳಲ್ಲಿ ವಾಂತಿ, ಬೇಧಿ ಪ್ರಕರಣಗಳೇ ಜಾಸ್ತಿ ಆಗಿದ್ದು, `ಎಲ್ಲಿ ಊಟ ಮಾಡಿದ್ದೀರಿ? ಎಲ್ಲಿ ತಿರುಗಾಟ ನಡೆಸಿದ್ದೀರಿ?’ ಎಂಬುದು ವೈದ್ಯರ ಸಾಮಾನ್ಯ ಪ್ರಶ್ನೆಯಾಗಿದೆ. ವಾಂತಿ-ಭೇದಿ-ಆಯಾಸ ಎಂದು ಬಳಲಿ ಬರುವವರಿಗೆ ಧೈರ್ಯ ಹೇಳಿ ಔಷಧಿ ಕೊಡುವುದರಲ್ಲಿಯೇ ವೈದ್ಯರ ದಿನ ಕಳೆಯುತ್ತಿದೆ. `ವಾತಾವರಣ ಬದಲಾವಣೆಯಾದಾಗ ಮನುಷ್ಯನ ದೇಹ ಒಮ್ಮೆಲೇ ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ವಾತಾವರಣದಲ್ಲಿ ಉತ್ಪನ್ನವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿ ಈ ದಿನಗಳಲ್ಲಿ ದೇಹಕ್ಕೆ ಕಡಿಮೆ ಇರುತ್ತವೆ. ಹೀಗಾಗಿ ವಾಂತಿ, ಬೇಧಿ ಸಮಸ್ಯೆ ಹೆಚ್ಚಾಗಿದೆ’ ಎಂಬುದು ವೈದ್ಯರ ಮಾತು. `ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಸಮಸ್ಯೆ ಇಲ್ಲ. ಆದರೆ, ಮಕ್ಕಳು ಮತ್ತು ವಯಸ್ಸಾದವರಲ್ಲಿ ವಾಂತಿ, ಬೇಧಿ ಸಮಸ್ಯೆ ಕಾಣಿಸುತ್ತಿದೆ. ಕಲುಷಿತ ನೀರು, ಆಹಾರ ಕ್ರಮದಲ್ಲಿಯ ಬದಲಾವಣೆ ಹಾಗೂ ಅತಿ ಬಿಸಿಲಿನಲ್ಲಿ ಸಂಚರಿಸಿದವರಲ್ಲಿ ವಾಂತಿ, ಬೇಧಿ ಪ್ರಕರಣಗಳು ಜಾಸ್ತಿಯಾಗಿ ಕಂಡುಬoದಿವೆ’ ಎಂದು ವೈದ್ಯರು ಹೇಳುತ್ತಾರೆ.
ಇನ್ನೂ ಹಳ್ಳಿ ಔಷಧದ ಅನುಭವ ಇದ್ದ ಕೆಲ ಹಿರಿಯರು ಇಂತಹ ಪರಿಸ್ಥಿತಿಗಳಲ್ಲಿ ನೇರಳೆ ಮರದ ತೊಟೆಯನ್ನು ಕಷಾಯ ಮಾಡಿ ಸ್ವೀಕರಿಸುವ ಮೂಲಕವೂ ವಾಂತಿ, ಬೇಧಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. `ವಾಂತಿ ಬೇಧಿ ಉಂಟಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ. ಈ ವೇಳೆ ಒಆರ್ಎಸ್ ಅಥವಾ ಮನೆಯಲ್ಲೇ ತಯಾರಿಸಿದ ಸಕ್ಕರೆ- ಉಪ್ಪಿನ ನೀರನ್ನು ಆಗಾಗ ಕುಡುಯುತ್ತಿರಬೇಕು’ ಎಂಬುದು ವೈದ್ಯರ ಸಲಹೆ. `ಎಳನೀರು, ಮಜ್ಜಿಗೆ, ನಿಂಬೆ ಪಾನಕದಂತಹದ ದ್ರವ ರೂಪದ ಆಹಾರ ಸೇವಿಸಿ ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳಬೇಕು. ಹಣ್ಣು, ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಹೊರ ಪ್ರದೇಶದ ತಿಂಡಿಗಳನ್ನು ತಿನ್ನುವುದನ್ನು ಕಡಿಮೆಗೊಳಿಸಬೇಕು. ವಾಂತಿ, ಬೇಧಿಯನ್ನು ನಿರ್ಲಕ್ಷ್ಯ ಮಾಡದೇ ಆದಷ್ಟು ಬೇಗ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಉತ್ತಮ’ ಎಂಬುದು ತಜ್ಞರ ನುಡಿ.