ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಾರ್ಥಿಸಿ ಅಂಕೋಲಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆ ಶಿವಕುಮಾರ ಅವರಿಗೆ ಆರೇ ತಿಂಗಳಿನಲ್ಲಿ ವರ ಸಿಕ್ಕಿದೆ. ಅಂಕೋಲಾದ ಶ್ರೀ ಜಗದೀಶ್ವರಿ ದೇವಿ ಡಿಕೆ ಶಿವಕುಮಾರ ಅವರ ಇಷ್ಟಾರ್ಥವನ್ನು ಪೂರೈಸಿದ್ದು, ದೇವಿಯ ಮಹಿಮೆ ಇನ್ನಷ್ಟು ಪ್ರಸಿದ್ಧಿಗೆ ಬಂದಿದೆ.
ಡಿ ಕೆ ಶಿವಕುಮಾರ ಅವರು 2025ರ ಡಿಸೆಂಬರ್ 19ರಂದು ವೈಯಕ್ತಿಕ ಪ್ರವಾಸದ ಹಿನ್ನಲೆ ಅಂಕೋಲಾಗೆ ಬಂದಿದ್ದರು. ಆಂದ್ರೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಂದು ದೇವಸ್ಥಾನದ ಒಳಕ್ಕೆ ಡಿಕೆ ಶಿವಕುಮಾರ ಅವರಿಗೆ ಮಾತ್ರ ಏಕಾಂತ ಪೂಜೆಗೆ ಅವಕಾಶ ನೀಡಲಾಗಿದ್ದು, ಈ ವೇಳೆ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್ ಅವರಿಗೆ ಸಹ ಒಳಗೆ ಪ್ರವೇಶ ನೀಡಿರಲಿಲ್ಲ. ದೇವಸ್ಥಾನದ ಬಾಗಿಲು ಮುಚ್ಚಿ ಈ ವಿಶೇಷ ಪೂಜೆ ನಡೆದಿದ್ದು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಡಿ ಕೆ ಶಿವಕುಮಾರ ಅವರು ವಿಶೇಷ ಪ್ರಾರ್ಥನೆ ಮಾಡಿದ್ದರು.
ಪೂಜಾ ಕಾರ್ಯದ ನಂತರ ಡಿ ಕೆ ಶಿವಕುಮಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ `ನನ್ನೊಂದಿಗೆ ತಾಯಿ ಮಾತನಾಡಿದ್ದಾಳೆ. ಶುಭ ಸೂಚನೆ ನೀಡಿದ್ದಾಳೆ’ ಎಂದಿದ್ದರು. `ಐದು ವರ್ಷದ ಹಿಂದೆ ಈ ಸ್ಥಳಕ್ಕೆ ಆಗಮಿಸಿ ಕುಟುಂಬದವರ ಜೊತೆ ಪ್ರಾರ್ಥನೆ ಮಾಡಿದ್ದೆ. ಆಗಲೂ ನನ್ನ ಬೇಡಿಕೆ ಈಡೇರಿದ್ದು, ಮತ್ತೆ ನಾನು ಇಲ್ಲಿಗೆ ಬರುತ್ತೇನೆ ಎಂದಿದ್ದೆ. ಅದರ ಪ್ರಕಾರ ಬಂದಿದ್ದೇನೆ’ ಎಂದಿದ್ದರು. ಆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಾತನಾಡುವಾಗ `ಮುಖ್ಯಮಂತ್ರಿ ಖುರ್ಚಿಗೆ ಎರಡೂವರೆ ವರ್ಷ ಅಂತ ಯಾವುದೇ ಒಪ್ಪಂದ ಆಗಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಹಾಗೆ ಹೈಕಮಾಂಡ್ ಕೂಡ ನನ್ನ ಪರವಾಗಿದೆ’ ಎಂದು ಹೇಳಿಕೆ ನೀಡಿದ್ದರು. ಅದನ್ನು ಮೀರಿ ಡಿ ಕೆ ಶಿವಕುಮಾರ ಅವರು ಇದೀಗ ಮುಖ್ಯಮಂತ್ರಿಯಾಗುತ್ತಿದ್ದು, ಇದಕ್ಕೆ ದೇವಿ ಆರ್ಶೀವಾದವೂ ಕಾರಣ ಎಂಬುದು ಅನೇಕರ ನಂಬಿಕೆ.
ಮುಖ್ಯಮAತ್ರಿ ಹುದ್ದೆಗಾಗಿ ದೇವರಲ್ಲಿ ಏನಾದರೂ ಪ್ರಾರ್ಥನೆ ಮಾಡಿಕೊಂಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ ಅವರು `ಇದು ನನ್ನ ಹಾಗೂ ತಾಯಿಯ ನಡುವಿನ ವಿಚಾರ. ಆದರೆ ನನಗೆ ತಾಯಿ ನನ್ನ ಜೊತೆಗಿರುತ್ತಾಳೆ ಎಂಬ ನಂಬಿಕೆ ಇದೆ’ ಎಂದಷ್ಟೇ ಹೇಳಿದ್ದರು. ಸದ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ನಂತರ ತಾಯಿ ಜಗದೀಶ್ವರಿಯ ದರ್ಶನ ಹಾಗೂ ವಿಶೇಷ ಪೂಜೆ ಸಲ್ಲಿಸುವದಾಗಿ ಹೇಳಿದ್ದರಿಂದ ಆದಷ್ಟು ಬೇಗ ಅಂಕೋಲಾಕ್ಕೆ ಆಗಮಿಸುವ ಸಾಧ್ಯತೆಯಿದೆ. ದೇವರ ದರ್ಶನ ಪಡೆಯುವದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಹೇಳಿದ ಬಗ್ಗೆ ಅರ್ಚಕ ಗಣೇಶ ನಾಯ್ಕ ಅವರು ತಿಳಿಸಿದ್ದಾರೆ.