ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಹೈಕೋರ್ಟ ಪೀಠದ ವಿಭಾಗಕ್ಕೆ ಸೇರಿಸಲು ಎಲ್ಲಡೆ ವಿರೋಧವ್ಯಕ್ತವಾಗುತ್ತಿದ್ದು, ಕಾರವಾರದ ವಕೀಲರ ಸಂಘವೂ ಈ ವಿರೋಧಕ್ಕೆ ಬೆಂಬಲ ನೀಡಿದೆ. `ಜಿಲ್ಲೆಗೆ ಸಂಬoಧಿಸಿದ ಹೈಕೋರ್ಟ ಧಾರವಾಡದಲ್ಲಿಯೇ ಇರಬೇಕು’ ಎಂದು ಆಗ್ರಹಿಸಿದ ಕಾರವಾರದ ವಕೀಲರು `ಅಗತ್ಯವಿದ್ದರೆ ಕರಾವಳಿ ಭಾಗಕ್ಕೆ ಹೊಸ ಹೈಕೋರ್ಟ ಪೀಠ ಘೋಷಿಸಿ, ಮಧ್ಯವರ್ತಿ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅದನ್ನು ಸ್ಥಾಪಿಸಿ’ ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ನ್ಯಾಯವಾದಿ ನಾಗರಾಜ ನಾಯಕ ಅವರು `ಹೊಸ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ ಪ್ರಸ್ತುತ ಇರುವಂತೆ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಜಿಲ್ಲೆಯನ್ನು ಮುಂದುವರಿಸಬೇಕು. ಹೈಕೋರ್ಟನ್ನು ಮಂಗಳೂರಿಗೆ ವ್ಯಾಪ್ತಿ ಬದಲಾದರೆ ಸಾರ್ವಜನಿಕರು ಹಾಗೂ ವಕೀಲರಿಗೆ ಭಾರೀ ಅನಾನುಕೂಲ ಉಂಟಾಗಲಿದೆ’ ಎಂದು ವಿವರಿಸಿದರು. ಕಾರವಾರದಿಂದ ಮಂಗಳೂರು 267ಕಿಮೀ ದೂರವಿದ್ದು ಸುಮಾರು 5 ಗಂಟೆಗಳ ಪ್ರಯಾಣ ಬೇಕಾಗುತ್ತದೆ. ಆದರೆ ಧಾರವಾಡ ಕೇವಲ 174ಕಿಮೀ ದೂರದಲ್ಲಿದೆ. ಹಳಿಯಾಳದಿಂದ ಮಂಗಳೂರಿಗೆ 363 ಕಿಮೀ ದೂರವಿದ್ದರೆ, ಧಾರವಾಡ ಕೇವಲ 8ಕಿಮೀ ಅಂತರದಲ್ಲಿದೆ’ ಎಂದು ಅಂಕಿ-ಅAಶಗಳೊAದಿಗೆ ವಿವರಿಸಿದರು. ಅವರ ಜೊತೆಗಿದ್ದ ವಕೀಲರಾದ ಸಂತೋಷ್ ಭಾಗ್ವತ್, ಚರಣ್ ನಾಯ್ಕ, ಶುಭಾ ಗಾಂವಕರ್, ಜ್ಯೋತಿ, ಡಿ ಆರ್ ನಾಯಕ, ಶುಭ ಭಟ್, ಎಂ ಎಲ್ ನಾಯಕ, ರಾಜೇಶ್ ಆಚಾರ್, ಅನಾಮಿಕ ರಾಣೆ, ಅಶೋಕ ಕುಮಾರ ಮತ್ತಿತರರು ಇದೇ ಅಭಿಪ್ರಾಯವ್ಯಕ್ತಪಡಿಸಿದರು.
`ಪ್ರಸ್ತುತ ಜಿಲ್ಲೆಯ ಕಂದಾಯ ವಿಭಾಗ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿರುವುದರಿಂದ ಹೈಕೋರ್ಟ್ ವ್ಯಾಪ್ತಿಯನ್ನು ಮಂಗಳೂರಿಗೆ ಬದಲಿಸಿದರೆ ಜನರು ಕಂದಾಯ ಮತ್ತು ಸಿವಿಲ್ ಪ್ರಕರಣಗಳಿಗೆ ಬೆಳಗಾವಿ ಹಾಗೂ ಮಂಗಳೂರು ಎರಡೂ ಕಡೆ ಓಡಾಡಬೇಕಾಗುತ್ತದೆ’ ಎಂದು ವಕೀಲರು ಕಳವಳ ವ್ಯಕ್ತಪಡಿಸಿದರು. `ಕರಾವಳಿ ಭಾಗಕ್ಕೆ ಪೀಠ ಸ್ಥಾಪನೆ ಮಾಡುವಾಗ ಕೇವಲ ಮಂಗಳೂರನ್ನು ಪರಿಗಣಿಸುವುದು ಸರಿಯಲ್ಲ. ಉತ್ತರ ಕನ್ನಡ ಜಿಲ್ಲೆಯೂ ಕರಾವಳಿಯ ಭಾಗವಾಗಿದ್ದು, ಭೌಗೋಳಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೊನ್ನಾವರದಂತಹ ಮಧ್ಯವರ್ತಿ ಪ್ರದೇಶ ಸೂಕ್ತ’ ಎಂದು ಹೇಳಿದರು.
`ಉಡುಪಿ ಜಿಲ್ಲೆಯಲ್ಲಿ 4 ಹಾಗೂ ದಕ್ಷಿಣ ಕನ್ನಡದಲ್ಲಿ 6 ವಕೀಲರ ಸಂಘಗಳಿದ್ದರೆ ಉತ್ತರ ಕನ್ನಡದಲ್ಲೇ 11 ವಕೀಲರ ಸಂಘಗಳಿವೆ. ಈ ಭಾಗದಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ಹೊಸ ಪೀಠಕ್ಕೆ ಉತ್ತರ ಕನ್ನಡವೇ ಹೆಚ್ಚು ಅರ್ಹತೆ ಹೊಂದಿದೆ’ ಎಂದು ವಕೀಲರ ಸಂಘದವರು ಒಕ್ಕೂರಲಿನಿಂದ ಹೇಳಿದರು. `ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಸಾಧ್ಯವಾಗದಿದ್ದರೆ ವಾರಕ್ಕೆ ಕನಿಷ್ಠ ಮೂರು ದಿನ ಕಾರ್ಯನಿರ್ವಹಿಸುವ ಸಂಚಾರಿ ಪೀಠವನ್ನಾದರೂ ಆರಂಭಿಸಬೇಕು’ ಎಂದು ಆಗ್ರಹಿಸಿದರು. ಮಂಗಳೂರು ಪೀಠದ ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸಲು ಮುಂದಾದರೆ ತೀವ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.