ಕಾರವಾರದ ತೋಡೂರಿನಲ್ಲಿ ಫೋನಿನಲ್ಲಿ ಮಾತನಾಡುತ್ತ ನಿಂತಿದ್ದ ಪ್ರದೀಪ ಗೌಡ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಬಿಣಗಾ ಒಕ್ಕಲಕೇರಿಯ ಪ್ರದೀಪ ರಮೇಶ ಗೌಡ (55) ಅವರು ಭಾನುವಾರ ತೋಡೂರಿಗೆ ಹೋಗಿದ್ದರು. ಅಲ್ಲಿ ಒಂದು ಬೈಕಿಗೆ ಚಾಚಿಕೊಂಡು ಅವರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿಯಾಗಿದ್ದು, ಪ್ರದೀಪ ಗೌಡ ಅವರು ರಸ್ತೆ ಮೇಲೆಯೇ ಕುಸಿದು ಬಿದ್ದರು. ಅಪಘಾತದ ರಭಸಕ್ಕೆ ಬೈಕ್ ಪಕ್ಕದ ಗದ್ದೆಗೆ ಹಾರಿ ಹೋಗಿದ್ದು, ಪ್ರದೀಪ ಗೌಡ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು.
ರಕ್ತ ಸುರಿಯುತ್ತಿರುವುದನ್ನು ನೋಡಿದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಈ ವಿಷಯ ಕೇಳಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮುತುವರ್ಜಿವಹಿಸಿದ್ದು, ಗಂಭೀರ ಗಾಯಗೊಂಡ ಪ್ರದೀಪ ಗೌಡ ಅವರನ್ನು ಉನ್ನತ ಚಿಕಿತ್ಸೆಗಾಗಿ ಗೋವಾ ಆಸ್ಪತ್ರೆಗೆ ಕಳುಹಿಸಿದರು. ಶಾಸಕ ಸತೀಶ್ ಸೈಲ್ ಅವರಿಂದಲೂ ಗೋವಾ ಆಸ್ಪತ್ರೆಗೆ ಫೋನ್ ಮಾಡಿಸಿ ಅಗತ್ಯ ಚಿಕಿತ್ಸೆಗೆ ಶಿಫಾರಸ್ಸು ಮಾಡಿಸಿದರು. ಸದ್ಯ ಪ್ರದೀಪ ಗೌಡ ಅವರು ಮಡಗಾವ್ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.