ಗೋಕರ್ಣದ ಗಂಗೆಕೊಳ್ಳದ ಮಾರುತಿ ತಾಂಡೇಲ ಅವರ ಮನೆಗೆ ಬೆಂಕಿ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಹಣದ ಜೊತೆ ದಿನ ಬಳಕೆ ಉಪಕರಣಗಳು ಸುಟ್ಟು ಕರಕಲಾಗಿದೆ. ವಿವಿಧ ದಾಖಲೆಗಳು ಸಹ ಭಸ್ಮವಾಗಿದೆ.
ಮಂಗಳವಾರ ಮುಂಜಾನೆ ಮಾರುತಿ ತಾಂಡೇಲ ಅವರು ಗಂಗಾಮಾತಾ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ನಡೆಯುವ ಶಿವ-ಗಂಗಾ ವಿವಾಹ ನಿಶ್ಚಿತಾರ್ಥ ಉತ್ಸವದ ಬಗ್ಗೆ ಅವರು ಮಾಹಿತಿಪಡೆಯುತ್ತಿದ್ದರು. ಆ ವೇಳೆ ಮನೆಗೆ ಬೆಂಕಿ ಬಿದ್ದ ಬಗ್ಗೆ ಅವರಿಗೆ ಫೋನ್ ಬಂದಿದ್ದು, ತಕ್ಷಣ ಅಲ್ಲಿಂದ ಓಡಿ ಬಂದರು. ಆದರೆ, ಅಷ್ಟರೊಳಗೆ ಮನೆಯೊಳಗಿದ್ದ ವಸ್ತುಗಳು ಕರಕಲಾಗಿದ್ದವು.
ಮನೆಯ ಒಳಗಿದ್ದ ಎರಡು ಫ್ಯಾನ್, ಪ್ರಿಜ್, ರೇಷನ್ ಕಾರ್ಡ ಸೇರಿ ಅನೇಕ ಮುಖ್ಯ ವಸ್ತುಗಳು ಬೆಂಕಿಗೆ ಆಹುತಿಯಾದವು. ನಾಡುಮಾಸ್ಕೇರಿ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಾ ನಾಯ್ಕ, ಸದಸ್ಯರಾದ ಚಂದ್ರಶೇಖರ ನಾಯ್ಕ, ನಾಗರಾಜ ತಾಂಡೇಲ ಇನ್ನಿತರರು ಮನೆಗೆ ಭೇಟಿ ನೀಡಿ, ನಷ್ಟ ಆದವರಿಗೆ ಸಮಾಧಾನ ಹೇಳಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ಅರಿವಿಗೆ ಬರಲಿಲ್ಲ.