ಯಲ್ಲಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ಸೊಸೈಟಿಗಳು ಹೆಚ್ಚಿದ್ದರೂ ಕೆಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಅಧಿಕೃತ ಅಭ್ಯರ್ಥಿಗೆ 2ಕ್ಕಿಂತ ಹೆಚ್ಚು ಮತ ಬೀಳಲಿಲ್ಲ. ಸಹಕಾರಿ ಭಾರತಿ ಅಡಿ ಗೆಲುವು ಸಾಧಿಸಿದ್ದ ಸೊಸೈಟಿ ಪ್ರತಿನಿಧಿಗಳು ಬಿಜೆಪಿಯ ಎದುರಾಳಿ ಅಭ್ಯರ್ಥಿ ಜೊತೆ ಕೈ ಕುಲುಕಿದ ಕಾರಣ ಸಹಕಾರಿ ಭಾರತಿಯ ಗೋಪಾಲಕೃಷ್ಣ ಗಾಂವ್ಕರ್ ಸೋಲು ಅನುಭವಿಸಿದರು. ಸಹಕಾರಿ ಭಾರತಿಯವರ ಸಹಕಾರದಿಂದಲೇ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದ ಶಿವರಾಮ ಹೆಬ್ಬಾರ್ ಅವರು ಸರಳವಾಗಿ ಗೆಲುವು ಸಾಧಿಸಿದರು!
ಗೋಪಾಲಕೃಷ್ಣ ಗಾಂವ್ಕರ್ ಅವರು ಯಲ್ಲಾಪುರ ಮತಕ್ಷೇತ್ರದಿಂದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿದ್ದರು. ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಆಗಿ, ಕ್ಷೇತ್ರದ ಶಾಸಕರು ಆಗಿರುವ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಅವರು ಸ್ಪರ್ಧೆ ಒಡ್ಡಿದ್ದರು. ಯಲ್ಲಾಪುರದ ಆನಗೋಡು ಸೊಸೈಟಿಯ ಮೂಲಕ ಗೋಪಾಲಕೃಷ್ಣ ಗಾಂವ್ಕರ್ ಅವರು ಪ್ರತಿನಿಧಿಸಿದ್ದರು. ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಎದುರಾಳಿಯಾಗಿರುವ ಶಿವರಾಮ ಹೆಬ್ಬಾರ್ ಅವರು ಇಡಗುಂದಿ ಸೊಸೈಟಿ ಮೂಲಕ ಅಖಾಡಕ್ಕೆ ಇಳಿದಿದ್ದರು. `ಸಹಕಾರಿ ಭಾರತಿ ಅಡಿಯಲ್ಲಿ ಯಲ್ಲಾಪುರದ 9 ಸೊಸೈಟಿಗಳಿದ್ದು, ಆ ಎಲ್ಲಾ ಸೊಸೈಟಿವರು ತಮ್ಮನ್ನು ಬೆಂಬಲಿಸುತ್ತಾರೆ’ ಎಂದು ಗೋಪಾಲಕೃಷ್ಣ ಗಾಂವ್ಕರ್ ಅವರು ಭಾವಿಸಿದ್ದರು. ಆದರೆ, ಅನೇಕ ಘಟಾನುಘಟಿ ನಾಯಕರು ಸಹಕಾರಿ ಭಾರತಿಯಿಂದ ಸ್ಪರ್ಧಿಸಿದ್ದ ಗೋಪಾಲಕೃಷ್ಣ ನಾಯಕರಿಗೆ ಕೈ ಕೊಟ್ಟು ಎದುರಾಳಿ ಶಿವರಾಮ ಹೆಬ್ಬಾರ್ ಅವರ ಕೈ ಹಿಡಿದರು!
ಸಹಕಾರಿ ಭಾರತಿ ಅಡಿಯಲ್ಲಿರುವ ಸೊಸೈಟಿಗಳು ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬೆಂಬಲ ನೀಡಿದ್ದರೆ ಕನಿಷ್ಟ ಅವರಿಗೆ 9 ಮತಗಳು ಬೀಳಬೇಕಿತ್ತು. ಆದರೆ, ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬರೇ ಎರಡು ಮತಗಳು ಮಾತ್ರ ಸಿಕ್ಕವು. ಅದರಲ್ಲಿ ಒಂದು ಮತ ಅವರದ್ದೇ ಆಗಿದ್ದು, ಮದನೂರು ಸೊಸೈಟಿಯವರು ಗೋಪಾಲಕೃಷ್ಣ ಗಾಂವ್ಕರ್ ಅವರನ್ನು ಬೆಂಬಲಿಸಿದರು. ಗೋಪಾಲಕೃಷ್ಣ ಗಾಂವ್ಕರ್ ಅವರಿಗೆ ಬೀಳಬಹುದಾದ ಇನ್ನೊಂದು ಮತ ನ್ಯಾಯಾಲಯದ ಆವರಣ ಪ್ರವೇಶಿಸಿತು. ಕಣ್ಣಿಗೇರಿ, ನಂದೂಳ್ಳಿ ಭಾಗದ ಮತಗಳು ಕೋರ್ಟು-ಕಚೇರಿ ಅಲೆದಾಟದ ಕಾರಣದಿಂದ ಚಲಾವಣೆ ಆಗಲಿಲ್ಲ. ಹೀಗಾಗಿ ಯಲ್ಲಾಪುರ ಮತಕ್ಷೇತ್ರದಲ್ಲಿ 16 ಸೊಸೈಟಿಯ ಮತಗಳಿದ್ದರೂ ಅದರಲ್ಲಿ 13 ಮಾತ್ರ ಚಲಾವಣೆ ನಡೆಯಿತು. ಕಳಚೆ, ದೆಹಳ್ಳಿ, ಮಲವಳ್ಳಿ ಮತಗಳ ನಿರೀಕ್ಷೆಯಲ್ಲಿದ್ದು, ಗೆಲುವು ಸುಲಭ ಎಂದುಕೊoಡಿದ್ದ ಸಹಕಾರಿ ಭಾರತಿಯ ಲೆಕ್ಕಾಚಾರ ತಲೆಕೆಳಗಾಯಿತು!
ಸಹಕಾರಿ ಭಾರತಿಯವರ ಸಹಕಾರದಿಂದಲೇ ಶಿವರಾಮ ಹೆಬ್ಬಾರ್ ಅವರು ಮತ್ತೊಮ್ಮೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದರು. ಮಂಕಾಳು ವೈದ್ಯ ಬಣದ ಮೂವರು ಮಾತ್ರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ಶಿವರಾಮ ಹೆಬ್ಬಾರ್ ಬಣದವರೇ ಹೆಚ್ಚಿದ್ದ ಕಾರಣ ಈ ಬಾರಿಯೂ ಶಿವರಾಮ ಹೆಬ್ಬಾರ್ ಅವರೇ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.