ಆಸ್ತಿ ಆಸೆಗಾಗಿ ಅಪ್ಪನನ್ನು ಕೊಂದು ಅರಣ್ಯದ ಕಡೆ ಓಡಿದ್ದ ಯಲ್ಲಾಪುರದ ಹರೀಶ ಮರಾಠಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅರಣ್ಯದಲ್ಲಿ ಅವಿತಿದ್ದ ಹರೀಶ ಮರಾಠಿ ಅವರನ್ನು ಒಂದು ತಂಡದವರು ಬೆನ್ನತ್ತಿದ್ದು, ಮತ್ತೊಂದು ತಂಡದವರು ಅಡ್ಡಗಟ್ಟಿ ಹಿಡಿದಿದ್ದಾರೆ.
ಭಾನುವಾರ ಯಲ್ಲಾಪುರದ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ವಾಸಿಸುತ್ತಿದ್ದ ನಾರಾಯಣ ಪರಶು ಮರಾಠಿ (51) ಅವರನ್ನು ಅವರ ಮಗ ಹರೀಶ ಮರಾಠಿ (29) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು. ಜೊತೆಗೆ ಹರೀಶ ಮರಾಠಿ ಅವರು ತಮ್ಮ ಸಹೋದರಿ ತಾರಾ ಮರಾಠಿ ಅವರ ಮೇಲೆಯೂ ಕೈ ಮಾಡಿದ್ದರು.
ಕುಟುಂಬದಲ್ಲಿನ ಕಲಹ ಹಾಗೂ ಆಸ್ತಿ ಮೇಲಿನ ಆಸೆ ಈ ಕೊಲೆ ಹಾಗೂ ಹಲ್ಲೆಗೆ ಪ್ರಮುಖ ಕಾರಣಗಳಾಗಿದ್ದವು. ತಂದೆಗೆ ಕೊಡಲಿಯಿಂದ ಹೊಡೆದು ಹರೀಶ ಮರಾಠಿ ಅವರು ಪರಾರಿಯಾಗಿದ್ದರು. ರಕ್ತದ ಮೊಡವಿನಲ್ಲಿ ಬಿದ್ದಿದ್ದ ತಂದೆಯನ್ನು ತಾರಾ ಮರಾಠಿ ಅವರು ಆಸ್ಪತ್ರೆಗೆ ಸೇರಿಸಿದಾಗ ಅವರು ಸಾವನಪ್ಪಿರುವ ವಿಷಯ ಗೊತ್ತಾಯಿತು. ಸಹೋದರನ ಕ್ರೌರ್ಯದ ಬಗ್ಗೆ ತಾರಾ ಮರಾಠಿ ಅವರು ಪೊಲೀಸ್ ದೂರು ನೀಡಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಹರೀಶ ಮರಾಠಿ ಅವರಿಗಾಗಿ ಹುಡುಕಾಟ ನಡೆಸಿದರು. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರ ಸೂಚನೆ ಮೇರೆಗೆ ಪಿಎಸ್ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಸುರೇಶ್ ಕಾಂಟ್ರೆಕ್ಟ್ ಹಾಗೂ ಗಿರೀಶ ಲಮಾಣಿ ಕಾಡಿನಲ್ಲಿ ಶೋಧ ನಡೆಸಿದರು. ಹೆಮ್ಮಾಡಿ ಬಸ್ ನಿಲ್ದಾಣ ಬಳಿಯ ಅರಣ್ಯ ಪ್ರದೇಶದಲ್ಲಿ ಹರೀಶ ಮರಾಠಿ ಅಡಗಿರುವುದು ಅರಿವಿಗೆ ಬಂದಿತು.
ಈ ಎಲ್ಲಾ ಪೊಲೀಸರು ಆರೋಪಿಯನ್ನು ಅಡ್ಡಗಟ್ಟಿ ಅಲ್ಲಿಯೇ ವಶಕ್ಕೆಪಡೆದರು. ಅದಾದ ನಂತರ ಪೊಲೀಸರು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಹರೀಶ ಮರಾಠಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆಪಡೆದರು.