ಸ್ವಚ್ಚತೆಯ ಬಗ್ಗೆ ಜನರಲ್ಲಿ ನಿರಂತರ ಅರಿವು ಮೂಡಿಸುತ್ತಿರುವ ಕಾರವಾರದ `ಪಹರೆ ವೇದಿಕೆ’ಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಸಿಕ್ಕಿದೆ. ಈ ಹಿನ್ನಲೆ ಪಹರೆ ಕಾರ್ಯಕರ್ತರನ್ನು ಜನಶಕ್ತಿ ವೇದಿಕೆ ಅಭಿನಂದಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿoದ ಪುರಸ್ಕಾರಪಡೆದ ಕಾರಣ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹಾಗೂ ಗೌರವ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಸನ್ಮಾನಿಸಿದ್ದಾರೆ. ಕಳೆದ 10 ವರ್ಷಗಳಿಂದ ಪಹರೆ ವೇದಿಕೆಯು ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬಂದಿದ್ದು, ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಹಿನ್ನಲೆ ಪಹರೆ ವೇದಿಕೆಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಹರೆ ವೇದಿಕೆಗೆ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆ’ ಎಂದು ಜನಶಕ್ತಿ ವೇದಿಕೆಯವರು ಹೇಳಿದ್ದಾರೆ.
`ಪಹರೆ ವೇದಿಕೆ 2003 ರಲ್ಲೇ ಪ್ರಾರಂಭಗೊoಡಿತ್ತು. ಆ ಸಂದರ್ಭದಲ್ಲಿ ನಾಗರಾಜ ನಾಯಕ ಅವರ ಜೊತೆ ಸಮಾನ ಮನಸ್ಕರು ಸೇರಿ ಭ್ರಷ್ಟಾಚಾರ ಮುಕ್ತ, ಅನ್ಯಾಯದ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೆವು’ ಎಂದು ಈ ವೇಳೆ ಮಾಧವ ನಾಯಕ ಅವರು ಸ್ಮರಿಸಿದರು. `2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರಿಂದ ಸ್ವಚ್ಚತಾ ಆಂದೋಲನ ಶುರು ಮಾಡಿದ ಪಹರೆ ವೇದಿಕೆ ನಿರಂತರವಾಗಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದೆ. ಜನರನ್ನೆಲ್ಲ ಒಗ್ಗೂಡಿಸಿ ಸಾಮಾಜಿಕ ಕಾರ್ಯ ಮಾಡುವುದೆಂದರೆ ಸುಲಭದ ಕೆಲಸವಲ್ಲ. ನಾಗರಾಜ ನಾಯಕ ಅವರು ವಕೀಲರಾಗಿಯೂ ಕಾರ್ಯದ ಒತ್ತಡಗಳ ನಡುವೆಯೂ ಪಹರೆ ವೇದಿಕೆಯನ್ನು ಇಷ್ಟು ದೊಡ್ಡ ಹೆಮ್ಮರವಾಗಿ ಕಟ್ಟಿ ಬೆಳೆಸಿದ್ದು ಶ್ಲಾಘನೀಯ’ ಎಂದು ಮಾಧವ ನಾಯಕ ಅವರು ಹೇಳಿದರು. ಪಹರೆ ವೇದಿಕೆ ಗೌರವ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್ ಅವರಿಗೆ `ಯಶಸ್ವಿ ಉದ್ಯಮಿ’ ಪ್ರಶಸ್ತಿಯೂ ಲಭಿಸಿದ್ದಕ್ಕೆ ಈ ವೇಳೆ ಅವರು ಶುಭಕೋರಿದರು.
ಕರಾವಳಿ ಮುಂಜಾವು ಪ್ರಧಾನ ಸಂಪಾದಕರಾದ ಗಂಗಾಧರ ಹಿರೇಗುತ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಸೂರಜ್ ಕುರೂಮಕರ್, ಸುರೇಶ್ ನಾಯ್ಕ, ಶಿವಾನಂದ ನಾಯ್ಕ, ಖೈರನುಸಾ ಶೇಖ್, ಕಾಶೀನಾಥ್ ನಾಯ್ಕ ಇತರರು ಸಾಧಕರಿಗೆ ಶುಭಕೋರಿದರು.