ಶಿರಸಿಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿರುವ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿ ಸಭೆ ನಡೆಸಿದ್ದಾರೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಹೋರಾಟಗಾರ ಉಪೇಂದ್ರ ಪೈ, ಭಜರಂಗದಳದ ಅಮಿತ್ ಶೇಟ್ ಅವರು ಈ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.
ಪ್ರತಿ ದಿನ ರಾತ್ರಿ ಬೀಡಾಡಿ ದನಗಳು ರಸ್ತೆ ಮದ್ಯೆ ಮಲಗುತ್ತಿದ್ದು, ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ವಾಹನದ ಜೊತೆ ಸರಕು-ಸಾಗಾಟ ವಾಹನ ಸವಾರರು ಸಹ ಬೀಡಾಡಿ ದನಗಳ ಕಾಟದಿಂದ ಬೇಸತ್ತಿದ್ದಾರೆ. ಹಾರ್ನ ಹಾಕಿದರೂ ದನ ರಸ್ತೆ ಬಿಟ್ಟು ಕದಲದ ಕಾರಣ ಚಾಲಕರೇ ವಾಹನ ನಿಲ್ಲಿಸಿ ಅವುಗಳನ್ನು ಓಡಿಸಿ ಮುಂದೆ ಸಾಗುತ್ತಿದ್ದಾರೆ. ಐದು ನಿಮಿಷ ವಾಹನ ಚಲಿಸಿದ ನಂತರ ಮತ್ತೆ ಇನ್ನಷ್ಟು ದನಗಳು ರಸ್ತೆ ಮೇಲೆ ಕಾಣುತ್ತಿವೆ. ಅನೇಕ ಬಾರಿ ದನಗಳಿಗೆ ವಾಹನ ಗುದ್ದಿದ ಉದಾಹರಣೆಗಳು ಇವೆ. ಹೀಗಾಗಿ ರಾತ್ರಿ ವೇಳೆ ಶಿರಸಿ ಮಾರ್ಗವಾಗಿ ಸಂಚರಿಸುವವರಿಗೆ ಬೀಡಾಡಿ ದನದ ಸಮಸ್ಯೆ ದೊಡ್ಡ ತಲೆನೋವಾಗಿದೆ.
ಮೊದಲು ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಅಂಟಿಸುವ ಕೆಲಸ ನಡೆದಿದ್ದು, ಅದರಿಂದ ಸಮಸ್ಯೆ ದೂರವಾಗಿಲ್ಲ. ರಸ್ತೆ ಮೇಲೆ ದನ ಮಲಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ರಸ್ತೆ ಮೇಲೆ ಅಡ್ಡಾಡುವ ಗೂಳಿಗಳು ಹಗಲಿನಲ್ಲಿ ಸಾರ್ವಜನಿಕರಿಗೂ ಭಯಪಡಿಸುತ್ತಿವೆ. ಬೀಡಾಡಿ ದನಗಳ ಮಾಲಕರ ಹುಟುಕಾಟಕ್ಕೆ ನಗರಸಭೆ ಅನೇಕ ಪ್ರಕಟಣೆ ನೀಡಿದೆ. ಆದರೆ, ಯಾರೊಬ್ಬರು `ಆ ದನ ನಮ್ಮದು’ ಎನ್ನುತ್ತಿಲ್ಲ. ಹಸು ಕರು ಹಾಕಿದಾಗ ಹಾಲು ಹಿಂಡಲು ಬರುವ ಜನ ಅದನ್ನು ಕೊಟ್ಟಿಗೆಗೆ ಒಯ್ದು ಸಾಕುತ್ತಿಲ್ಲ. ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ಬಿಸಾಕಿದ ತ್ಯಾಜ್ಯ, ಹೊಟೇಲ್ ಆಹಾರ ತಿಂದು ಬೆಳೆಯುತ್ತಿರುವ ಜಾನುವಾರುಗಳ ಬಗ್ಗೆ ಕಾಳಜಿವಹಿಸುವವರೂ ಇಲ್ಲ. ಹಸು ಕಳ್ಳತನ ನಡೆದಾಗ ಮಾತ್ರ ಇದೆಲ್ಲ ವಿಷಯ ಜೋರು ಸದ್ದು ಮಾಡುತ್ತಿದ್ದು, ನಂತರ ಬೀಡಾಡಿ ದನಗಳ ಸುದ್ದಿಗೆ ಬರುವವರಿಲ್ಲ.
ಈ ಎಲ್ಲಾ ಸಮಸ್ಯೆ ಬಗೆಹರಿಸಲು ಇದೀಗ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಮಂಗಳವಾರ ಬಿಡಾಡಿ ದನಗಳಿಂದ ಆಗುವ ಸಾವು-ನೋವು ನಿಯಂತ್ರಣಕ್ಕೆ ಸಭೆ ನಡೆದಿದೆ. ದನಗಳ ಮಾಲಕರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ನಗರಸಭೆ, ಪಶು ಇಲಾಖೆ, ತಹಶೀಲ್ದಾರ್, ಯೋಜನಾ ಪ್ರಾಧಿಕಾರದವರು ಈ ಸಭೆಯಲ್ಲಿದ್ದು ಸಾರ್ವಜನಿಕರು ಸಹ ಸಮಸ್ಯೆ ಹೇಳಿಕೊಂಡಿದ್ದಾರೆ. ತಹಶಿಲ್ದಾರ ಪಟ್ಟರಾಜ ಗೌಡಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ್ರು, ಡಿವಾಎಸ್ಪಿ ಗೀತಾ ಪಾಟಿಲ್, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಬಸವ ಅವರು ಸಮಸ್ಯೆ ಆಲಿಸಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ನಗರಸಭೆ ಬೀಡಾಡಿ ದನಗಳ ಮಾಲಕರನ್ನು ಪತ್ತೆ ಮಾಡಲು ನಗರಸಭೆ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಯೋಜನೆ ಸಿದ್ಧಪಡಿಸಿದೆ. ಐದು ವರ್ಷದ ಹಿಂದೆ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ನಿರ್ಮಿಸಿದ ಕೊಂಡವಾಡೆ ಇದೀಗ ಪ್ರಯೋಜನಕ್ಕೆ ಬರುವ ಆಶಾಭಾವನೆವ್ಯಕ್ತವಾಗಿದೆ.