ನೇಪಾಳದ ಪೊಖರಾ ನಗರದಲ್ಲಿ ನಡೆದ `ಇಂಡೋ-ನೇಪಾಳ್ ಇಂಟರನ್ಯಾಶನಲ್ ಸರಣಿ-2025’ರಲ್ಲಿ ಧನಗರ ಗೌಳಿ ಸಮುದಾಯದ ಮೋತಿರಾಮ್ ಗಂಗಾರಾಮ ಗುರ್ಖೆ ಹಾಗೂ ಕೃಷ್ಣ ಗಂಗಾರಾಮ ಗುರ್ಖೆ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅವರು ಪ್ರತಿಷ್ಠಿತ ಪ್ರಮಾಣ ಪತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೋತಿರಾಮ್ ಗಂಗಾರಾಮ ಗುರ್ಖೆ ಹಾಗೂ ಕೃಷ್ಣ ಗಂಗಾರಾಮ ಗುರ್ಖೆ ಅವರು ಬೆಳಗಾವಿ ಜಿಲ್ಲೆಯ ಖಾನಾಪುರದ ಬಾಳಗುಂದ ಗ್ರಾಮದವರಾಗಿದ್ದಾರೆ. ಹಿಂದುಳಿದ ವರ್ಗದವರಾಗಿದ್ದರೂ ಉನ್ನತ ಮಟ್ಟದ ಸಾಧನೆ ಮಾಡಿದಕ್ಕಾಗಿ ಯಲ್ಲಾಪುರದ ಮದನೂರು ಗ್ರಾಮ ಪಂಚಾಯತ ಸದಸ್ಯ ಲಕ್ಷ್ಮಣ ಥೋರತ್ ಅವರು ಆ ಸಾಧಕರನ್ನು ಅಭಿನಂದಿಸಿದ್ದಾರೆ. `ಅತ್ಯಂತ ಹಿಂದುಳಿದ ಪ್ರದೇಶದವರಾದ ಅವರಿಬ್ಬರು ವನವಾಸಿಗಳಾಗಿದ್ದು, ತಮ್ಮ ಪ್ರತಿಭೆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಅವರು ಸಂತಸವ್ಯಕ್ತಪಡಿಸಿದ್ದಾರೆ.. `ಇಂಥ ಪ್ರತಿಭೆಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಬೇಕು’ ಎಂದು ಅವರು ಆಶಿಸಿದ್ದಾರೆ.
ಮೋತಿರಾಮ್ ಗಂಗಾರಾಮ ಗುರ್ಖೆ ಮತ್ತು ಕೃಷ್ಣ ಗಂಗಾರಾಮ ಗುರ್ಖೆ ಅವರು ಈ ಹಿಂದೆ ಹರಿಯಾಣದಲ್ಲಿ ನಡೆದ 3ನೇ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು. ಅದೇ ಆಧಾರದಲ್ಲಿ ಅವರು ನೇಪಾಳದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.