ವಿಪರೀತ ಸರಾಯಿ ಕುಡಿಯುತ್ತಿದ್ದ ಬನವಾಸಿಯ ಗಣೇಶ ಹೂವಿನಕೊಪ್ಪಲಕೇರಿ ಅವರ ಜೊತೆ ಸಂಸಾರ ಮಾಡಲಾಗದೇ ಅವರ ಪತ್ನಿ ರಂಜಿತಾ ಅವರು ದೂರವಾಗಿದ್ದು, ಇದೇ ನೋವಿನಲ್ಲಿ ಗಣೇಶ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನ ಚಿಕಿತ್ಸೆ ಕೊಡಿಸಿದರೂ ಗಣೇಶ ಅವರು ಬದುಕಲಿಲ್ಲ.
Advertisement. Scroll to continue reading.
ಶಿರಸಿ ತಾಲೂಕಿನ ಬನವಾಸಿಯ ಹೂವಿನಕೊಪ್ಪಲಕೇರಿಯಲ್ಲಿ ಗಣೇಶ ಅವರು ವಾಸವಾಗಿದ್ದರು. ಸಾಗರದ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಯವರಿಗೆ ಕೊಡುತ್ತಿದ್ದರು. ಇದನ್ನು ಸಹಿಸದ ಗಣೇಶ ಅವರ ಪತ್ನಿ ರಂಜಿತಾ ಪತಿ ಬಿಟ್ಟು ದೂರವಾಗಿದ್ದರು. ಪತ್ನಿ ದೂರವಾದ ಹಿನ್ನಲೆ ಗಣೇಶ ಅವರು ಬೇಸರಿಸಿಕೊಂಡಿದ್ದರು. ಆದರೆ, ಮದ್ಯ ಸೇವನೆಯ ಚಟವನ್ನು ಮಾತ್ರ ಅವರು ಬಿಟ್ಟಿರಲಿಲ್ಲ.
ಹೀಗಿರುವಾಗ ನವೆಂಬರ್ 10ರಂದು ಗಣೇಶ ಅವರು ಬನವಾಸಿಯಲ್ಲಿರುವ ಅಕ್ಕ ವಾಸಂತಿ ಅವರ ಮನೆಗೆ ಬಂದರು. `ಮನೆಯಲ್ಲಿದ್ದ ಕೆಲ ಕಾಗದಪತ್ರಗಳನ್ನು ಒಯ್ಯಲು ಬಂದಿರುವೆ’ ಎಂದು ವಾಸಂತಿ ಅವರ ಬಳಿ ತಿಳಿಸಿದರು. ಮಧ್ಯಾಹ್ನ ಅಕ್ಕನ ಮನೆಯಲ್ಲಿ ಊಟ ಮಾಡಿದರು. ಸಂಜೆ ಮನೆಯಿಂದ ಹೊರ ಹೋಗಿದ್ದ ಗಣೇಶ ಅವರು ರಾತ್ರಿ 8 ಗಂಟೆಗೆ ಮತ್ತೆ ಮನೆ ಸೇರಿದ್ದರು.
ಆ ವೇಳೆ ವಾಸಂತಿ ಅವರು ಮನೆಗೆ ಬಂದರು. ಗಣೇಶ ಅವರು ಮನೆಯ ಕೋಣೆಯಲ್ಲಿ ವಾಂತಿ ಮಾಡುತ್ತಿರುವುದನ್ನು ನೋಡಿದರು. ಹತ್ತಿರ ಹೋಗಿ ನೋಡಿದಾಗ ಪಕ್ಕದಲ್ಲಿ ವಿಷದ ಬಾಟಲಿ ಬಿದ್ದಿತ್ತು. ಕೂಡಲೇ ತಮ್ಮನನ್ನು ಪ್ರಶ್ನಿಸಿದರು. ಆದರೆ, ಗಣೇಶ ಅವರು ಮಾತನಾಡಲಿಲ್ಲ. ಹೀಗಾಗಿ ಗಣೇಶ ಅವರನ್ನು ವಾಸಂತಿ ಅವರು ಬನವಾಸಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಬಳಿ ಗಣೇಶ ಅವರು ವಿಷ ಸೇವಿಸಿದ ವಿಷಯ ಹೇಳಿದರು.
ಅದಾದ ನಂತರ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅಲ್ಲಿ ನಾಲ್ಕು ದಿನಗಳ ಚಿಕಿತ್ಸೆ ನಡೆಯಿತು. ಆದರೆ, ನವೆಂಬರ್ 14ರಂದು ಗಣೇಶ ಅವರು ಕೊನೆಯುಸಿರೆಳೆದರು.
`ಆತ್ಮಹತ್ಯೆ ಅಪರಾಧ’