ಮುಂಡಗೋಡದ ಹನಮಾಪುರದಲ್ಲಿನ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ. ಪರಿಣಾಮ ಮನೆಯೊಳಗೆ ವಾಸವಾಗಿದ್ದ ಪಕೀರವ್ವ ಆಲೂರು ಅವರು ಸುಟ್ಟು ಕರಕಲಾಗಿದ್ದಾರೆ.
ಶುಕ್ರವಾರ ರಾತ್ರಿ ದಿಢೀರ್ ಆಗಿ ಮನೆಗೆ ಬೆಂಕಿ ತಗುಲಿದೆ. ಮನೆಯೊಳಗಿದ್ದ 70 ವರ್ಷದ ವೃದ್ಧೆ ಪಕೀರವ್ವ ಆಲೂರು ಹೊರಬರುವುದರೊಳಗೆ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿಯ ಜ್ವಾಲೆಯಲ್ಲಿ ಬೆಂದು ಪಕೀರವ್ವ ಅವರು ಕೊನೆಯುಸಿರೆಳೆದಿದ್ದಾರೆ.
ಪಕೀರವ್ವ ಆಲೂರು ಅವರು ಒಂಟಿ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಅವರ ಮನೆಗೆ ಹೇಗೆ ಬಂಕಿ ತಗುಲಿತು? ಎಂದು ಗೊತ್ತಾಗಿಲ್ಲ. ಸುಟ್ಟ ಗಾಯದ ನೋವಿನಿಂದ ನರಳುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. 108 ಆಂಬುಲೆನ್ಸ ಸಿಬ್ಬಂದಿ ಮೊದಲು ಅವರನ್ನು ಮುಂಡಗೋಡು ಆಸ್ಪತ್ರೆಗೆ ಸಾಗಿಸಿದರು. ನಂತರ ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಅದು ಫಲ ಕೊಡಲಿಲ್ಲ.
ಮನೆಗೆ ಬಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದರು. ಆದರೆ, ಅಷ್ಟರೊಳಗೆ ಮನೆ ಆಹುತಿಯಾಗಿತ್ತು. ಸದ್ಯ ಅವಘಡಕ್ಕೆ ಕಾರಣ ಏನು? ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ.