`ರಾಜ್ಯ ಸಚಿವ ಸಂಪುಟದಲ್ಲಿ ಯಾವ ಮಂತ್ರಿ ಸ್ಥಾನವೂ ಖಾಲಿ ಇಲ್ಲ’ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಕಾರವಾರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು `ಸಚಿವ ಸ್ಥಾನದ ಆಕಾಂಕ್ಷಿಗಳು ಹಲವರಿದ್ದಾರೆ. ಆದರೆ, ಅವರಿಗೆ ಪದವಿ ಕೊಡಲು ಹುದ್ದೆ ಖಾಲಿ ಇಲ್ಲ’ ಎಂದು ಹೇಳಿದ್ದಾರೆ.
`ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ಎರಡು ಸ್ಥಾನ ಖಾಲಿ ಇದ್ದರೂ ಅದನ್ನು ವರಿಷ್ಠರೂ ನೋಡಿಕೊಳ್ಳುತ್ತಾರೆ’ ಎಂದವರು ಪ್ರತಿಕ್ರಿಯಿಸಿದ್ದಾರೆ. `ಸ್ಥಳೀಯ ಸಂಸ್ಥೆ ಚುನಾವಣೆಗಳು ಪಕ್ಷಾತೀತವಾಗಿ ನಡೆಯಲಿದೆ. ಫೆಬ್ರವರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಆಗುವ ಸಾಧ್ಯತೆಯಿದ್ದು, ಅದಾದ ನಂತರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ’ ಎಂದವರು ತಿಳಿಸಿದರು.
`ಜಿಲ್ಲೆಗೆ ತೊಂದರೆ ಆಗುವ ಯಾವ ಯೋಜನೆಯನ್ನು ತರುವುದಿಲ್ಲ. ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನಾ ಸಮಿತಿ ಮಾಡುತ್ತೇವೆ. ಹೀಗಾಗಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಹೆಚ್ಚಿನ ಅನುಧಾನ ಪಡೆಯಲು ನಿರ್ಧರಿಸಲಾಗಿದೆ. ಸಾಮಾನ್ಯ ಜನರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಾವೇ ಯೋಜನೆ ರೂಪಿಸುತ್ತೇವೆ. ಅದರೊಂದಿಗೆ ಸರಕಾರದ ಯೋಜನೆಗಳು ಬರುತ್ತವೆ’ ಎಂದವರು ಹೇಳಿದರು.