ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಮ್ಮ ಸಂಗಡಿಗರ ಜೊತೆ ಕುಂದರಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಪಿಎಸ್ಐ ರಾಜಶೇಖರ ವಂದಲಿ ಅವರು ತಮ್ಮ ಸಹಚರರ ಜೊತೆ ಬೈಲಂದೂರಿನಲ್ಲಿ ರಾತ್ರಿ ಕಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕ `ಮನೆ ಮನೆಗೂ ಪೊಲೀಸ್’ ಎಂಬ ಅಭಿಯಾನ ನಡೆಸುತ್ತಿದೆ. ಅದರ ಮುಂದುವರೆದ ಭಾಗವಾಗಿ ಪೊಲೀಸರು ಇದೀಗ ಕುಗ್ರಾಮಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಆ ಮೂಲಕ ಜನರ ವಿಶ್ವಾಸಗಳಿಸಿ ಅವರಿಂದ ವಿವಿಧ ಬಗೆಯ ಮಾಹಿತಿ ಸಂಗ್ರಹಿಸುವ ಕಾರ್ಯ ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸೋಮವಾರ ಯಲ್ಲಾಪುರ ಪೊಲೀಸರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆಯವರೆಗೂ ಕಾಡಿನ ಪ್ರದೇಶದ ಕೊಠಡಿಯಲ್ಲಿ ಉಳಿದು ಜನರ ಸಮಸ್ಯೆ ಆಲಿಸಿದ್ದಾರೆ.
ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸೋಮವಾರ ಸಂಜೆ ಕುಂದರಗಿಯ ಪ್ರಗತಿ ವಿದ್ಯಾಲಯಕ್ಕೆ ಹೋಗಿದ್ದರು. ಅಲ್ಲಿನ ಜನರನ್ನು ಮಾತನಾಡಿಸಿ ಅವರ ಸಮಸ್ಯೆ ಬಗ್ಗೆ ಚರ್ಚಿಸಿದರು. `ಯಾವುದೇ ಸಮಸ್ಯೆ ಆದರೂ ಪೊಲೀಸರ ನೆರವುಪಡೆಯಿರಿ’ ಎಂದು ಧೈರ್ಯ ಹೇಳಿದರು. ಅಪಘಾತ ನಿಯಂತ್ರಣದ ಮುನ್ನಚ್ಚರಿಕೆ, ಸೈಬರ್ ಅಪರಾಧ ಕುರಿತು ಅಲ್ಲಿನವರಿಗೆ ಅರಿವು ಮೂಡಿಸಿದರು. ಆ ಭಾಗದ ಬೀಟ್ ಪೊಲೀಸ್ ಸುರೇಶ ಕಾಂಟ್ರೆಕ್ಟ್ ಹಾಗೂ ಪೊಲೀಸ್ ಜೀಪ್ ಚಾಲಕ ಕೃಷ್ಣ ಮಾತೋಜಿ ಅವರು ಇಡೀ ರಾತ್ರಿ ಜನರ ಜೊತೆಗಿದ್ದು ಅಲ್ಲಿನವರ ಆಗು-ಹೋಗುಗಳಿಗೆ ಸ್ಪಂದಿಸಿದರು. ತುರ್ತು ಸನ್ನಿವೇಶದಲ್ಲಿ 112ಗೆ ಫೋನ್ ಮಾಡುವಂತೆ ಮನವಿ ಮಾಡಿದರು.
ಇನ್ನೂ ಬೈಲಂದೂರಿನಲ್ಲಿ ಪಿಎಸ್ಐ ರಾಜಶೇಖರ ವಂದಲಿ ಅವರು ಸೋಮವಾರ ರಾತ್ರಿ ಕಳೆದರು. ಪೊಲೀಸ್ ಸಿಬ್ಬಂದಿ ಮಾರುತಿ ಎಚ್ ಅವರ ಜೊತೆ ಸೇರಿ ಅಕ್ರಮ ಚಟುವಟಿಕೆಗಳ ಬಗ್ಗೆ ಅವರು ಮಾಹಿತಿಪಡೆದರು. ಅಕ್ರಮ ಚಟುವಟಿಕೆ ನಡೆಸಿದವರಿಗೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. `ಕುಂದರಗಿ ಭಾಗದಲ್ಲಿ ಸ್ವಾಮೀಜಿ ಅವರ ವೇಷ ಧರಿಸಿ ಬರುವ ಅಪರಿಚಿತರ ಸಂಖ್ಯೆ ಹೆಚ್ಚಾಗಿದೆ. ಗುರುತು-ಪರಿಚಯ ಇಲ್ಲದವರು ಧಾರ್ಮಿಕ ನಾಯಕರ ವೇಷಧರಿಸಿ ಬಂದು ಹಣ ಕೇಳುತ್ತಾರೆ’ ಎಂದು ಜನ ದೂರಿದರು. `ಕೆಲವರು ರಾತ್ರಿ ವೇಳೆ ಕುಡಿದು ಗಲಾಟೆ ಮಾಡುತ್ತಾರೆ. ಅವರಿಂದ ಊರಿನ ವಾತಾವರಣ ಹಾಳಾಗುತ್ತಿದೆ’ ಎಂದು ವಿವರಿಸಿದರು. `ರಸ್ತೆ ಕೆಲಸ ನಡೆಯುತ್ತಿರುವುದರಿಂದ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಿ’ ಎಂದು ಊರಿನವರು ಕೇಳಿಕೊಂಡರು. ಈ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದರು.
`ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಮುಂದಾಳತ್ವದಲ್ಲಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಅದರ ಭಾಗವಾಗಿ ಪೊಲೀಸರು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ಊರಿನವರು ಸಿಗುವುದರಿಂದ ಮುಕ್ತ ಮಾತುಕಥೆ ಸಾಧ್ಯವಿದೆ. ಜನರನ್ನು ವಿಶ್ವಾಸಕ್ಕೆಪಡೆದು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ನಡೆದಿದೆ’ ಎಂದು ಪಿಐ ರಮೇಶ ಹಾನಾಪುರ ಅವರು ಪ್ರತಿಕ್ರಿಯಿಸಿದರು.