ಗೋಕರ್ಣದ ರಾಮತೀರ್ಥದ ಬಳಿ ಪುಣ್ಯ ಸ್ನಾನ ಮಾಡುತ್ತಿದ್ದ ಬೊಮ್ಮಯ್ಯ ಆಗೇರ್ ಅವರು ಅಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಗೋಕರ್ಣ ಬಳಿಯ ಬಂಕಿಕೊಡ್ಲ ಸಮೀಪದ ಬಂಗ್ಲೆಗುಡ್ಡದವರಾಗಿದ್ದ ಬೊಮ್ಮಯ್ಯ ಸೋಮು ಆಗೇರ (47) ಅವರು ಸದಾ ಕಡಲು-ಕಿನಾರೆ ಬಳಿ ಸುತ್ತಾಡುತ್ತಿದ್ದರು. ಜನ ಹೇಳಿದ ಎಲ್ಲಾ ಕೆಲಸವನ್ನು ಅವರು ಮಾಡುತ್ತಿದ್ದರು. ಒಮ್ಮೊಮ್ಮೆ ಕುಣಿಯುವುದು, ದಿಡೀರ್ ಆಗಿ ಕೆಲಸ ಮಾಡುವುದು, ಏಕಾಏಕಿ ನಗುವುದು ಹಾಗೂ ಮನಸ್ಸು ಬಂದಾಗಲೆಲ್ಲ ಅಳುವ ಮನಸ್ಥಿತಿಯನ್ನು ಅವರು ಹೊಂದಿದ್ದರು. ಅನೇಕರು ಅನೇಕ ರೀತಿಯ ಕೆಲಸಗಳಿಗೆ ಬೊಮ್ಮಯ್ಯ ಆಗೇರ್ ಅವರನ್ನು ಬಳಸಿಕೊಳ್ಳುತ್ತಿದ್ದರು. ಯಾರೂ ಏನೇ ಕೆಲಸ ಹೇಳಿದರೂ ಬೊಮ್ಮಯ್ಯ ಆಗೇರ್ ಅವರು ಅದನ್ನು ಮಾಡುತ್ತಿದ್ದರು.
ಕಡಲಿನಲ್ಲಿ ಅಲೆದಾಡುವ ಅವರು ರಾಮ ಮಂದಿರ ಬಳಿಯ ರಾಮತೀರ್ಥದಲ್ಲಿ ಸ್ನಾನ ಮಾಡುವ ಪರಿಪಾಠ ಹೊಂದಿದ್ದರು. ಸ್ನಾನದ ನಂತರ ದೇಗುಲ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿಯಿಂದ ಅವರು ನಮಿಸುತ್ತಿದ್ದರು. ಮಂಗಳವಾರ ರಾಮತೀರ್ಥದ ಝರಿ ನೀರು ಬೀಳುವ ಸ್ಥಳಕ್ಕೆ ತೆರಳಿದ ಅವರು ಅಲ್ಲಿ ಪುಣ್ಯ ಸ್ನಾನದಲ್ಲಿ ನಿರತರಾಗಿದ್ದರು. ದಿಢೀರ್ ಆಗಿ ಅವರು ಅಲ್ಲಿಯೇ ಕುಸಿದು ಬಿದ್ದರು. ಬೊಮ್ಯಯ್ಯ ಆಗೇರ್ ಅವರನ್ನು ಅಲ್ಲಿನವರು ಆಸ್ಪತ್ರೆಗೆ ಕರೆತಂದರು. ಆ ವೇಳೆಗೆ ಅವರು ಸಾವನಪ್ಪಿರುವ ಸಂಗತಿ ಗೊತ್ತಾಯಿತು.