ಯಲ್ಲಾಪುರದ ಕಿರವತ್ತಿ ಬಳಿ ರಸ್ತೆ ಪಕ್ಕ ನಿಂತಿದ್ದ ಬಾಬು ಶಿಂಧೆ ಅವರ ಮೇಲೆ ಅನಗತ್ಯವಾಗಿ ಕೈ ಮಾಡಿದ ದೊಂಡು ಪಟಗಾರೆ ಅವರಿಗೆ ನ್ಯಾಯಾಲಯ 2 ಸಾವಿರ ರೂ ದಂಡ ವಿಧಿಸಿದೆ.
Advertisement. Scroll to continue reading.
2020ರ ಮಾರ್ಚ 10ರಂದು ಈ ಗಲಾಟೆ ನಡೆದಿತ್ತು. ಯಲ್ಲಾಪುರ ಕಿರವತ್ತಿ ಬಳಿಯ ಡೌಗಿನಾಳ ಕಿರವತ್ತಿ ರಸ್ತೆ ಬಂಡಿಕೊಪ್ಪದ ಬಳಿ ಆ ದಿನ ಬಾಬು ಶಿಂದೆ ಅವರು ನಿಂತಿದ್ದರು. ಸಂಜೆ ಅವರು ಬೈಕ್ ಪರಿಶೀಲನೆ ಮಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ ದೊಂಡು ಬಾಬು ಪಟಗಾರೆ ಅವರು ಕೆಟ್ಟದಾಗಿ ನಿಂದಿಸಿದ್ದರು. ಈ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ಶುರುವಾಗಿತ್ತು.
ದೊಂಡು ಪಟಗಾರೆ ಅವರು ಬಾಬು ಶಿಂಧೆ ಅವರಿಗೆ ಗುದ್ದಿದ್ದರು. ಬಾಬು ಶಿಂಧೆ ಅವರ ಅಂಗಿ ಹರಿದು ಅವಮಾನ ಮಾಡಿದ್ದರು. ತಮ್ಮ ಬೆಲ್ಟಿನಿಂದ ಬಾಬು ಶಿಂಧೆ ಅವರಿಗೆ ಬಾರಿಸಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಬಾಬು ಶಿಂಧೆ ಅವರು ಪೊಲೀಸರಿಗೆ ದೂರಿದ್ದರು. ಆ ವೇಳೆ ಪೊಲೀಸ್ ಉಪನಿರೀಕ್ಷಕರಾಗಿದ್ದ ಮಂಜುನಾಥ ಎಸ್ ಗೌಡರ್ ಅವರು ಪ್ರಕರಣದ ತನಿಖೆ ನಡೆಸಿದ್ದರು.
ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಜಿಲ್ಲಾ ನ್ಯಾಯಾಧೀಶ ಕಿರಣ ಕಿಣಿ ಅವರು ಎಲ್ಲಾ ಸಾಕ್ಷಿಗಳನ್ನು ಗಮನಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಆರೋಪಿ ದೊಂಡು ಪಟಗಾರೆ ಅವರ ಹೊಡೆದಾಟದ ಸ್ವರೂಪವನ್ನು ನ್ಯಾಯಾಲಯಕ್ಕೆ ವಿವರಿಸಿದರು. ದಾಖಲೆಗಳ ಆಧಾರದಲ್ಲಿ ದೊಂಡು ಪಟಗಾರೆ ಅವರನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ್ದು, 2 ಸಾವಿರ ರೂ ದಂಡ ಪಾವತಿಸಲು ಆದೇಶಿಸಿತು.