ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಸಾಕಿದ್ದ ಶ್ವಾನ ವ್ಯಾಘ್ರನ ಪಾಲಾಗಿದೆ. ಶಾಸಕರ ಮನೆಗೆ ನುಗ್ಗಿದ ಚಿರತೆ ನಾಯಿಯನ್ನು ಕೊಂದಿದೆ.
ಭೀಮಣ್ಣ ನಾಯ್ಕ ಅವರು ಮಳಲಗಾವಿನಲ್ಲಿ ತೋಟ ಹೊಂದಿದ್ದಾರೆ. ಅಲ್ಲಿ ಅವರು ತೋಟದ ರಕ್ಷಣೆಗಾಗಿ ನಾಯಿಗಳನ್ನು ಸಾಕಿದ್ದಾರೆ. ಮಂಗಳವಾರ ನಸುಕಿನಲ್ಲಿ ತೋಟದ ಮನೆಗೆ ಚಿರತೆ ನುಗ್ಗಿದ್ದು, ಅಲ್ಲಿದ್ದ ನಾಯಿಗಳಿಗೆ ಹೊಂಚು ಹಾಕಿದೆ. ಐದು ನಾಯಿಗಳನ್ನು ಚಿರತೆ ಬೆನ್ನತ್ತಿ ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಂಚು ಹಾಕಿ ಕುಳಿತಿದ್ದ ಚಿರತೆ ಕೊನೆಗೆ ಮರಿ ನಾಯಿಯ ಕತ್ತು ಹಿಡಿದು ಕೊಂದಿದೆ. ಅದೇ ನಾಯಿಯನ್ನು ಹಿಡಿದು ಕಾಡಿನ ಕಡೆ ಚಲಿಸಿದೆ. ಮನೆ ಹೊರಭಾಗದಲ್ಲಿ ಆಟವಾಡುತ್ತಿದ್ದ ನಾಯಿ ಚಿರತೆ ಪಾಲಾಗಿರುವುದನ್ನು ಇನ್ನಿತರ ನಾಯಿಗಳು ಗಮನಿಸಿದ್ದು, ಇನ್ನಿತರ ನಾಯಿಗಳು ಬೊಗಳಿ ಅಲ್ಲಿಂದ ಓಡಿವೆ.
ಬೆಳಗ್ಗೆ ತೋಟದ ಮನೆ ಸಿಬ್ಬಂದಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಚಿರತೆ ಆಗಮನದ ಬಗ್ಗೆ ಅರಿವಾಗಿದೆ. ಚಿರತೆ ನಾಯಿ ಹಿಡಿದು ಕಾಡಿಗೆ ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಸುದ್ದಿ ಕೇಳಿ ಶಾಸಕರ ಮನೆಗೆ ಭೇಟಿ ನೀಡಿದ್ದಾರೆ. ಚಿರತೆ ಆಗಮನ ಕುರುಹುಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.