ಆಸ್ತಿಯಲ್ಲಿ ಭಾಗ ಕೊಡದ ಕಾರಣ ಯಲ್ಲಾಪುರದ ಹರೀಶ ಮರಾಠಿ ಅವರು ತಮ್ಮ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಸಾಯಿಸಿದ್ದಾರೆ. ಮಗನ ಆಕ್ರೋಶ ಹಾಗೂ ಹಣದ ಹಪಾಹಪಿತನಕ್ಕೆ ನಾರಾಯ ಮರಾಠಿ ಅವರು ಶವವಾಗಿದ್ದಾರೆ.
ಯಲ್ಲಾಪುರದ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಾರಾಯಣ ಪರಶು ಮರಾಠಿ (51) ಅವರು ವಾಸವಾಗಿದ್ದರು. ಅವರಿಗೆ ಹರೀಶ ಮರಾಠಿ (29) ಹಾಗೂ ತಾರಾ ಮರಾಠಿ (26) ಎಂಬ ಮಕ್ಕಳಿದ್ದರು. ಹರೀಶ ಮರಾಠಿ ತೋಟದ ಕೆಲಸ ನೋಡಿಕೊಂಡಿದ್ದು, ತಾರಾ ಮರಾಠಿ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಹರೀಶ ಮರಾಠಿ ಅವರಿಗೆ ವಿವಾಹವಾಗಿದ್ದು, ಅವರ ಜೊತೆ ಸವೀತಾ ಹಾಗೂ ಮಗಳು ಸುರಕ್ಷಾ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಹೀಗಿರುವಾಗ ಸವಿತಾ ಮರಾಠಿ ಹಾಗೂ ತಾರಾ ಮರಾಠಿ ಅವರ ನಡುವೆ ವೈಮನಸ್ಸು ಮೂಡಿತ್ತು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಪತ್ನಿ ಮಾತಿಗೆ ಮರಳಾಗುತ್ತಿದ್ದ ಹರೀಶ ಮರಾಠಿ ಅವರು ಆಗಾಗ ತಾರಾ ಮರಾಠಿ ಅವರಿಗೆ ಹೊಡೆಯುತ್ತಿದ್ದರು. ಹೊಡೆದಾಟ ವಿಕೋಪಕ್ಕೆ ತೆರಳಿದಾಗ ತಾರಾ ಅವರೇ ಸುಮ್ಮನಾಗುತ್ತಿದ್ದರು. ನವೆಂಬರ್ 8ರಂದು ಸಹ ಆ ಮನೆಯಲ್ಲಿ ಗಲಾಟೆ ನಡೆಯಿತು. ಆ ದಿನದ ಗಲಾಟೆ ಅಲ್ಲಿಯೇ ಮುಗಿಯಿತು.
ಆದರೆ, ನವೆಂಬರ್ 9ರಂದು ಹಿಂದಿನ ದಿನದ ಗಲಾಟೆ ಮರುಕಳಿಸಿತು. ಸವಿತಾ ಮರಾಠಿ ಅವರು ಮನೆ ಸ್ವಚ್ಚ ಮಾಡಿವಾಗ ತಾರಾ ಅವರು ಅಲ್ಲಿಗೆ ಬಂದಿದ್ದು ಗಲಾಟೆಗೆ ಕಾರಣವಾಯಿತು. ಈ ವಿಷಯವಾಗಿ ಸವಿತಾ ಮರಾಠಿ ಅವರು ತಮ್ಮ ಪತಿ ಹರೀಶ ಮರಾಠಿ ಅವರ ಕಿವಿ ಚುಚ್ಚಿದರು. ಪತ್ನಿ ಜೊತೆ ಜಗಳ ಮಾಡಿದ ತಂಗಿ ವಿರುದ್ಧ ಸಿಟ್ಟಾದ ಹರೀಶ ಮರಾಠಿ ಅವರು ದೊಡ್ಡದಾಗಿ ಕೂಗಿ ತಾರಾ ಮರಾಠಿ ಅವರನ್ನು ಥಳಿಸಿದರು. ಹರೀಶ ಮರಾಠಿ ಅವರು ತಾರಾ ಮರಾಠಿ ಅವರ ಕೆನ್ನೆಗೆ ಬಾರಿಸಿದ ಪರಿಣಾಮ ತಾರಾ ಮರಾಠಿ ಅವರ ಮೂಗಿನಿಂದ ರಕ್ತ ಸುರಿಯಿತು.
ತಾರಾ ಮರಾಠಿ ಅವರ ತಂದೆ ನಾರಾಯಣ ಮರಾಠಿ ಮಧ್ಯಾಹ್ನ ತೋಟದಿಂದ ಮನೆಗೆ ಬಂದರು. ಆಗ, ತಾರಾ ಮರಾಠಿ ಅವರು ಅಣ್ಣನಿಂದ ಆದ ಅನ್ಯಾಯದ ಬಗ್ಗೆ ವರದಿ ಒಪ್ಪಿಸಿದರು. ಮಗಳ ಮೇಲೆ ಕೈ ಮಾಡಿದ ಕಾರಣ ನಾರಾಯಣ ಮರಾಠಿ ಅವರು ಹರೀಶ ಮರಾಠಿ ಅವರಿಗೆ ಬೈದರು. ‘ನಿನ್ನ ವಿರುದ್ಧ ಕಂಪ್ಲೇಟ್ ಕೊಟ್ಟು ಬರುವೆ’ ಎಂದು ನಾರಾಯಣ ಮರಾಠಿ ಅವರು ಗದರಿಸಿದರು. ಇದರಿಂದ ಸಿಟ್ಟಾದ ಹರೀಶ ಮರಾಠಿ ‘ಈಗಲೇ ಈ ಮನೆ ಬಿಟ್ಟು ಹೋಗು’ ಎಂದು ತಂದೆಗೆ ಗದರಿಸಿದರು. ಅದಾಗಿಯೂ ಅಲ್ಲಿಯೇ ನಿಂತಿದ್ದ ತಂದೆ ನಾರಾಯಣ ಮರಾಠಿ ಅವರ ತಲೆಗೆ ಕೊಡಲಿ ಬೀಸಿದರು.
‘ಮನೆ ಸಾಲ ನಾನೇ ತೀರಿಸಿದ್ದು. ಮದುವೆ ಸಾಲವನ್ನು ನಾನೇ ತೀರಿಸಿದ್ದು. ಆದರೂ ನನಗೆ ಆಸ್ತಿ ಕೊಡಲಿಲ್ಲ’ ಎಂದು ಅಬ್ಬರಿಸಿದ ಹರೀಶ ಮರಾಠಿ ಅವರು ನಾರಾಯಣ ಮರಾಠಿ ಅವರ ಕಡೆ ಮತ್ತೊಮ್ಮೆ ಕೊಡಲಿ ಬೀಸಿದರು. ಎಡ ಕಿವಿಯ ಬಳಿ ಕೊಡಲಿ ತಾಗಿದ ಪರಿಣಾಮ ನಾರಾಯಣ ಮರಾಠಿ ಅವರು ಅಲ್ಲಿಯೇ ಕುಸಿದು ಬಿದ್ದರು. ಅವರ ಮೈಮೇಲಿದ್ದ ಬಟ್ಟೆ ನೆಲಕ್ಕೆ ಬಿದ್ದು ರಕ್ತ ಚೆಲ್ಲಿತು.
ಇದನ್ನು ನೋಡಿದ ಹರೀಶ ಮರಾಠಿ ಕೊಡಲಿಸಹಿತ ಓಡಿ ಪರಾರಿಯಾದರು. ತಾರಾ ಮರಾಠಿ ಅವರು ನಾರಾಯಣ ಮರಾಠಿ ಅವರನ್ನು ಯಲ್ಲಾಪುರ ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ನಾರಾಯಣ ಮರಾಠಿ ಅವರು ಸಾವನಪ್ಪಿದ್ದರು. ಪಿಎಸ್ಐ ರಾಜಶೇಖರ ವಂದಲಿ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹರೀಶ ಮರಾಠಿ ಅವರ ಶೋಧ ಕಾರ್ಯಾಚರಣೆಯೂ ನಡೆದಿದೆ.