ಯಲ್ಲಾಪುರದ ಕನ್ನಡಗಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಳೆಗನ್ನಡ ಭಾಷೆಯ ಶಾಸನಗಳು ಸಿಕ್ಕಿವೆ. ಕನ್ನಡಗಲ್, ಚಿಕ್ಕಮಾವಳ್ಳಿ ಹಾಗೂ ಮಾವಳ್ಳಿ ಪ್ರದೇಶದಲ್ಲಿನ ಶಾಸನಗಳ ಅಧ್ಯಯನಕ್ಕೆ ತಜ್ಞರು ಆಸಕ್ತಿವಹಿಸಿದ್ದಾರೆ.
`ತ್ರಿಭುವನ ಮಲ್ಲ’ ಎಂಬ ಬಿರುದು ಹೊಂದಿದ್ದ 5ನೇ ವಿಕ್ರಮಾದಿತ್ಯನ ಕಾಲದ ಯುದ್ಧದ ಸನ್ನಿವೇಶದ ವೀರಗಲ್ಲುಗಳು, ಶಾಸನ ಇಲ್ಲಿರುವುದು ದೃಢವಾಗಿದೆ. ಬೊಮ್ಮಣ್ಣ ನಾಯ್ಕ, ಬಲ್ಲಾಳದೇವ, ತಮ್ಮಣ್ಣ ನಾಯ್ಕ, ಮದ್ವಿಜ ನಾಯಕ ಎಂಬ ಹೆಸರಿನವರ ಹೋರಾಟದ ಕಥೆಗಳನ್ನು ಈ ಶಾಸನ ಹೇಳುತ್ತಿದೆ. ಪುರಾತನ ಕಾಲದ ಶಿಲ್ಪಕಲೆ, ಶಾಸನಗಳು, ದೇವಾಲಯದ ಕುರುಹುಗಳು ಇಲ್ಲಿದ್ದು, ಮೋಡಿ ಲಿಪಿ ತಜ್ಞ ಸಂಗಮೇಶ ಕಲ್ಯಾಣಿ ಅವರ ನೇತೃತ್ವದಲ್ಲಿ ಸಂಶೋಧನೆ ಶುರುವಾಗಿದೆ.
`ಗೆದ್ದರೆ ಜಯ, ಸೋತರೆ ವೀರಮರಣ’ ಎಂಬ ಧ್ಯೇಯ ವ್ಯಾಕ್ಯ ಬರೆದ ವೀರಗಲ್ಲುಗಳು ಇಲ್ಲಿ ಕಾಣಿಸುತ್ತಿವೆ. ಆ ವೀರಗಲ್ಲುಗಳಲ್ಲಿ ಯುದ್ಧದಲ್ಲಿ ಮಡಿದವರ ವಿವರಗಳಿವೆ. ವೀರ ಮರಣಕ್ಕೀಡಾದವರನ್ನು ವಾದ್ಯ, ಹಾಡು, ನರ್ತನದ ಮೂಲಕ ಮೆರವಣಿಗೆಯಲ್ಲಿ ಸ್ವರ್ಗಕ್ಕೆ ಕಳುಹಿಸುತ್ತಿರುವ ಬಗೆಯ ಚಿತ್ರಣಗಳು ಕಾಣಿಸುತ್ತಿವೆ. ಇದರೊಂದಿಗೆ ನಂದಿ, ಈಶ್ವರ ಲಿಂಗಗಳ ಕೆತ್ತನೆ ನಡೆದಿದ್ದು, ಅವುಗಳಿಗೆ ಪೂಜೆ ಸಲ್ಲಿಸುವುದು ಹಾಗೂ ತಪಸ್ಸಿಗೆ ಕುಳಿತ ಜೈನಮುನಿಗಳ ಚಿತ್ರಗಳ ಕೆತ್ತನೆ ಗಮನಸೆಳೆಯುತ್ತಿದೆ.
ಅನತಿ ದೂರದಲ್ಲಿ ಭುವನೇಶ್ವರಿ ದೇವಸ್ಥಾನದ ಕುರುಹು, ಕರ್ಣಮುಚ್ಚುಗೆ, ಕಲ್ಯಾಣಿ, ನಂದಿ ವಿಗ್ರಹಗಳು ವಿರೂಪವಾಗಿ ಗೋಚರಿಸಿದೆ. ಅಗಸ್ತ್ಯ ಮುನಿ ಹಾಗೂ ಅವರ ಶಿಷ್ಯ ವಾಲಖಿಲ್ಯ ಮುನಿಗಳಿಂದ ಈ ಭಾಗದಲ್ಲಿ ಭುವನೇಶ್ವರಿಯ ದೇವಸ್ಥಾನ ಸ್ಥಾಪನೆ, ಆರಾಧನೆ ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಎಲ್ಲಾ ಹಿನ್ನಲೆ ಪಾಳುಬಿದ್ದಿರುವ ಕನ್ನಡಗಲ್ಲಿನ ಕನ್ನಡದ ಶಾಸನಗಳ ಉತ್ಖನನ, ಸಂಶೋಧನೆ ಹಾಗೂ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.
`ಕಳೆದ ಕೆಲವು ತಿಂಗಳಿನಿoದ ಈ ಭಾಗದ ಶಾಸನಗಳ ಬಗ್ಗೆ ಅಧ್ಯಯನ ನಡೆಸುತ್ತಿಸ್ದು, ಜೈನ, ಶೈವ ಶಾಸನಗಳು ಹೇರಳವಾಗಿವೆ. ತ್ರಿಭುವನ ಮಲ್ಲ ಬಿರುದಾಂಕಿಯ ವಿಕ್ರಮಾದಿತ್ಯನ ಶಾಸನಗಳಾಗಿದ್ದು, ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿವೆ. ಇವುಗಳ ಅಧ್ಯಯನ, ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಭುವನೇಶ್ವರಿಯ ಕ್ಷೇತ್ರ ಪ್ರತೀತಿ ಹೊಂದುವ ರೀತಿಯಲ್ಲಿ ಪುನರ್ ಸ್ಥಾಪನೆ ಆಗಬೇಕು’ ಎಂದು ಸಂಶೋಧನೆ ನಡೆಸಿದ ಸಂಗಮೇಶ ಕಲ್ಯಾಣಿ ಅವರು ಆಗ್ರಹಿಸಿದ್ದಾರೆ.
`ಅಕಾಲಿಕ ಮರಣ, ಅಂಗವಿಕಲರ ಜನನ ಮೊದಲಾದ ಅಶುಭ ಸಂಕೇತದ ಹಿನ್ನಲೆ ತಜ್ಞರಲ್ಲಿ ವಿಚಾರಿಸಿದಾಗ ಶಾಸನ ಹಾಗೂ ದೇವಾಲಯ ಕುರುಹುಗಳ ಬಗ್ಗೆ ಮಾಹಿತಿ ಸಿಕ್ಕಿತು. ಈಗಾಗಲೇ ತಾತ್ಕಾಲಿಕವಾಗಿ ಭುವನೇಶ್ವರಿ ದೇವಿಯ ಪ್ರತಿಷ್ಠೆಯನ್ನು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಮಾಡಲಾಗಿದ್ದು, ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಆಲೋಚನೆಯಿದೆ’ ಎಂದು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ಗುರುಪಾದಯ್ಯ ನಂದೊಳ್ಳಿಮಠ ಅವರು ತಿಳಿಸಿದರು.
ಮೈಸೂರಿನ ಪಿರ್ಯಾಪಟ್ಟಣದ ಆಶಾ ಅಮ್ಮ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶ್ನೆ ನೋಡಿದ್ದರು. ಅದರ ಆಧಾರದಲ್ಲಿ ಸಂಶೋಧನೆ ಶುರುವಾಗಿದ್ದು, ಅಧ್ಯಯನಕಾರರು ತಮ್ಮ ಕಾರ್ಯ ಶುರು ಮಾಡಿದ್ದಾರೆ. ಭಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಸ್ಥಳೀಯರಾದ ಶೇಷಗಿರಿ ಹೆಗಡೆ, ನಾಗರಾಜ ಹೆಗಡೆ, ಎಂ.ಎಸ್ ಹೆಗಡೆ, ಗಣಪತಿ ಹೆಗಡೆ, ಸಿದ್ದಾರ್ಥ ನಂದೊಳ್ಳಿಮಠ, ಗಣಪತಿ ಮರಾಠಿ, ದೀಪಕ ನಾಯ್ಕ, ಅಕ್ಷಯ ಮರಾಠಿ, ನಾಗರಾಜ ನಾಯ್ಕ, ಸಂತೋಷ ಗುಡಿಗಾರ, ನಂದೀಶ ಮರಾಠಿ, ವಿಘ್ನೇಶ್ವರ ಹೆಗಡೆ ಇತರರು ಸಂಶೋಧನೆ ವೇಳೆ ಜೊತೆಗಿದ್ದರು.