ಯಲ್ಲಾಪುರದ ಅಂಬೇಡ್ಕರ್ ನಗರದಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ಭುವನೇಶ್ವರಿ ದೇವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಮಾತಶ್ರೀ ಆಶಾ ಅಮ್ಮನವರು ಭೂಮಿ ಪೂಜೆ ನೆರವೇರಿಸಿದ್ದಾರೆ.
ಅಂಬೇಡ್ಕರ ನಗರದ ಕೋಟೆಕರಿಯಮ್ಮ ದೇವಾಲಯ ಸನ್ನಿಧಿಯಲ್ಲಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣಕ್ಕಾಗಿ ಅಂಬೇಡ್ಕರ ನಗರದ ಜನ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದ್ದಾರೆ. ದಾನಿಗಳ ನೆರವಿನಿಂದ ಉತ್ತಮ ದೇಗುಲ ನಿರ್ಮಾಣ ಕೆಲಸ ಶುರುವಾಗಿದೆ. `ಯಲ್ಲಾಪುರದ ಜನರಿಗೆ ತಾಯಿ ಭುವನೇಶ್ವರಿ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಸಮಸ್ತ ಜನ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದು ಆಶಾ ಅಮ್ಮನವರು ಈ ವೇಳೆ ಕರೆ ನೀಡಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ನೆರವು ನೀಡಲು ಸರ್ವರಿಗೂ ಸಮಾನ ಅವಕಾಶವಿದ್ದು, ಭುವನೇಶ್ವರಿ ದೇವಸ್ಥಾನ ನಿರ್ಮಾಣ ಕಾಣಿಕೆ 5001ರೂಪಾಯಿಗಳಾಗಿದೆ. ಕರ್ಣ ಮುಚ್ಚಿಗೆ ಹಾಗೂ ತಾಮ್ರ ಗೋಪುರ ದೇಣಿಗೆ 10001ರೂ, 0.5 ಚದರ ಅಡಿ ಕಟ್ಟಡ ನಿರ್ಮಾಣಕ್ಕೆ 12500ರೂ ಹಾಗೂ 1 ಚದರ ಅಡಿ ನಿರ್ಮಾಣಕ್ಕೆ 25 ಸಾವಿರ ರೂ ದೇಣಿಗೆಯನ್ನು ಆಡಳಿತ ಮಂಡಳಿ ನಿಗದಿ ಮಾಡಿದೆ. ಭಕ್ತರು ತನು-ಮನ-ಧನ ಸಹಾಯ ಮಾಡಿ ಭುವನೇಶ್ವರಿ ದೇವಿಯ ಸೇವೆ ಮಾಡಲು ಬರಬೇಕು ಎಂದು ಶ್ರೀ ಭುವನೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.