ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಜೊಯಿಡಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 11ಕಿಮೀ ಪಾದೆಯಾತ್ರೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಜೋಯಿಡಾ ತಾಲೂಕಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಹಿಂದೆ ಹೋರಾಟ ನಡೆಸಿದಾಗ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ ಎಂದು ಆಕ್ಷೇಪವ್ಯಕ್ತಪಡಿಸಿದರು. `ಜೊಯಿಡಾ ಹಿಂದುಳಿದ ತಾಲೂಕು ಎಂದು ಸರ್ಕಾರವೇ ನಿರ್ಧರಿಸಿದೆ. ಆದರೆ, ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ರಸ್ತೆ, ವಿದ್ಯುತ್, ಬಸ್ ಸಂಪರ್ಕ ಸೇರಿ ಅನೇಕ ಬಗೆಯ ಸೌಕರ್ಯ ಸಿಗದ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು.
`ಕಿರವತ್ತಿ, ಕಾರಟೋಳಿ, ಡಿಗ್ಗಿ, ಗೋವಾ ಗಡಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆಯಾಗಬೇಕು. ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣವಾಗಬೇಕು. ಕಿರವತ್ತಿ, ತೆರಾಳಿ, ಸಿಸೈ, ದೂಧಮಳಾ ರಸ್ತೆ ಡಾಂಬರಿಕರಣ ಮತ್ತು ಸೇತುವೆ ನಿರ್ಮಾಣವಾಗಬೇಕು. ಡಿಗ್ಗಿ ಮುಖ್ಯ ರಸ್ತೆ ಯಿಂದ ಕಸಂಬಾ, ಅಂತರೆ, ತಳೆ, ನಮ್ಶಿ, ಬುಳಬುಳೆ, ಧಾಮಣಕುಣಂಗ, ಮಾರ್ಲಿ, ಫಾತರಶೇತ ಮತ್ತು ಗೋಟ್ಕಾರ ರಸ್ತೆ ಸುಧಾರಣೆಯಾಗಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ಜೋಯಿಡಾದಿಂದ ಕಾರ್ಟೋಳಿ ವಸತಿ ಬಸ್ ಪ್ರಾರಂಭವಾಗಬೇಕು. ಜೋಯಿಡಾದಿಂದ ಕುಂಡಲ ವಸತಿ ಬಸ್ ಶುರುವಾಗಬೇಕು. ಕಾರವಾರದಿಂದ ಕದ್ರಾ ಮಾರ್ಗವಾಗಿ ಸುಳಗೇರಿಗೆ ರಾತ್ರಿ ಬಸ್ ಪುನಃ ಪ್ರಾರಂಭಿಸಬೇಕು. ಗ್ರಾಮಿಣ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಕಾರ್ಟೋಳಿಯಲ್ಲಿ ನ್ಯಾಯಬೆಲೆ ಅಂಗಡಿ ಪ್ರಾರಂಭವಾಗಬೇಕು.
ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕಾಮಗಾರಿಗೆ ತೊಂದರೆ ನೀಡುವುದಕ್ಕೆ ಕಿಡಿಕಾರಿದರು. ಜೊಯಿಡಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಈ ವೇಳೆ ಆಗ್ರಹಿಸಿದರು.