ಎರಡುವರೆ ತಿಂಗಳ ವಿರಾಮದ ನಂತರ ಅನಂತಮೂರ್ತಿ ಹೆಗಡೆ ತಮ್ಮ ಹೋರಾಟ ಮತ್ತೆ ಶುರು ಮಾಡಿದ್ದಾರೆ. `ಯಲ್ಲಾಪುರದಲ್ಲಿ ಟೆಕ್ ಪಾರ್ಕ ನಿರ್ಮಿಸಬೇಕು’ ಎಂದು ಅವರು ಶುರು ಮಾಡಿದ್ದ ಹೋರಾಟ ಎಂಟು ತಿಂಗಳಿನಿoದ ಅರ್ದಕ್ಕೆ ನಿಂತಿದ್ದು, ಅದೇ ವಿಷಯ ಮಾತನಾಡುವುದಕ್ಕಾಗಿ ಅವರು ಬೆಳಗಾವಿಗೆ ಹೋಗಿದ್ದಾರೆ.
Advertisement. Scroll to continue reading.
ಕಳೆದ ವರ್ಷ ನಡೆದ ಚಳಿಗಾಲದ ಅಧಿವೇಶನದ ಅವಧಿಯಲ್ಲಿ ಹೊಸ ಜಿಲ್ಲೆ ಸ್ಥಾಪನೆ ಬಗ್ಗೆ ಅನಂತಮೂರ್ತಿ ಹೆಗಡೆ ಅವರು ಹೋರಾಟ ನಡೆಸಿದ್ದರು. ಬೆಳಗಾವಿಯಲ್ಲಿ ಅವರು ಪ್ರತಿಭಟನೆ ನಡೆಸಿ ಆಡಳಿತ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡಬೇಕು ಎಂದು ಒತ್ತಾಯಿಸಿದ್ದರು. `ಶಿರಸಿ ಕೇಂದ್ರವನ್ನಾಗಿಸಿಕೊoಡು ಪ್ರತ್ಯೇಕ ಜಿಲ್ಲೆ ಮಾಡಬೇಕು’ ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು. ಈ ವೇಳೆ ಅನೇಕ ರಾಜಕಾರಣಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ವಿವಿಧ ಆಶ್ವಾಸನೆ ನೀಡಿದ್ದರು. ಈ ಬಾರಿ ಅನಂತಮೂರ್ತಿ ಹೆಗಡೆ ಅವರು ಅದೇ ಸ್ಥಳದಲ್ಲಿ ನಡೆಯುವ ಅಧಿವೇಶನಕ್ಕೆ ಹೋಗಿ ಮತ್ತೊಂದು ಬೇಡಿಕೆ ಮುಂದಿಟ್ಟಿದ್ದಾರೆ.
ಬಿಜೆಪಿ ಮುಖಂಡರಾಗಿರುವ ಅನಂತಮೂರ್ತಿ ಹೆಗಡೆ ಅವರು ಈ ಬಾರಿ ಸದ್ಯ ಕಾಂಗ್ರೆಸ್ ನಾಯಕರಾಗಿರುವ ವಿ ಎಸ್ ಪಾಟೀಲ ಅವರ ಜೊತೆ ಕೈ ಜೋಡಿಸಿದ್ದಾರೆ. ಸೆಪ್ಟೆಂಬರ್ 22ರಂದು ಶಿರಸಿ ಹೈಟೆಕ್ ಆಸ್ಪತ್ರೆ ವಿಷಯವಾಗಿ ಮಾತನಾಡಿ, ನಂತರ ಹೋರಾಟಗಳಿಂದ ದೂರವೇ ಉಳಿದಿದ್ದ ಅನಂತಮೂರ್ತಿ ಹೆಗಡೆ ಅವರು ಈ ದಿನ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ವಿ ಎಸ್ ಪಾಟೀಲ ಅವರ ಜೊತೆ ಅವರು ಬೆಳಗಾವಿಯ ಸುವರ್ಣ ಸೌಧ ಪ್ರವೇಶಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ಅವರನ್ನು ಭೇಟಿಯಾಗಿ ಯಲ್ಲಾಪುರದ ಮಾಗೋಡು ಕಾಲೋನಿಯನ್ನು `ವಿಶೇಷ ಕೈಗಾರಿಕಾ ಪ್ರದೇಶ’ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ 300 ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದೆ. ಮೂಲತಃ ಬೇಡ್ತಿ ಯೋಜನೆಗಾಗಿ ಕೆಪಿಸಿಗೆ ಕಾಲನಿ ನಿರ್ಮಾಣ ಮಾಡಲು ರೂಪಿಸಿದ್ದಾಗಿದ್ದು, ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ. ಆ ಜಾಗವನ್ನು ಅರಣ್ಯ ಇಲಾಖೆಯಿಂದ ಮರಳಿಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮೂಲಕ ಟೆಕ್ ಪಾರ್ಕ ನಿರ್ಮಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಹೀಗೆ ಮಾಡುವುದರಿಂದ ಇಲ್ಲಿನ ಯುವಕರು ಬೇರೆ ಕಡೆ ವಲಸೆ ಹೋಗುವುದನ್ನು ತಡೆಯಲು ಸಾಧ್ಯ’ ಎಂದವರು ಹೇಳಿದ್ದಾರೆ.
ಪ್ರಮುಖರಾದ ಗಣೇಶ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್, ಕೆ. ಟಿ ಹೆಗಡೆ ಸಹ `ಮಾಗೋಡಿನಲ್ಲಿ ಹೊಸ ಕ್ರಾಂತಿ ಶುರು ಮಾಡಬೇಕು’ ಎಂದಿದ್ದಾರೆ.