ಜೊಯಿಡಾದ ರಾಮನಗರ-ಧಾರವಾಡ ಮಾರ್ಗದಲ್ಲಿ ಅಪಘಾತವಾಗಿದೆ. ವ್ಯಾಗನಾರ್ ಕಾರು ಮುಂಡವಾಡದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಭಾನುವಾರ ನಡೆದ ಈ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಗೋವಾದ ಪಣಜಿಯಿಂದ ಆಳಣಾವರ ಕಡೆ ಈ ಕಾರು ಹೊರಟಿತ್ತು. ಅಬ್ದುಲ್ ಖಾದರ್ (55) ಎಂಬಾತರು ಕಾರನ್ನು ಓಡಿಸುತ್ತಿದ್ದರು. ಈ ಕಾರಿನಲ್ಲಿ ದಾದು (30) ಹಾಗೂ ಹಿನಾ ಕೌಸರ್ (39) ಎಂಬಾತರು ಕುಳಿತಿದ್ದರು. ರಾಮನಗರ ದಾಟಿದ ನಂತರ ಕಾರಿನ ವೇಗ ಹೆಚ್ಚಾಗಿದ್ದು, ಆ ಕಾರು ಚಾಲಕನ ನಿಯಂತ್ರಣ ತಪ್ಪಿತು.
ಪರಿಣಾಮ ರಸ್ತೆ ಬದಿಗಿದ್ದ ಮರಕ್ಕೆ ಕಾರು ಗುದ್ದಿತು. ಆ ರಭಸಕ್ಕೆ ಕಾರು ಓಡಿಸುತ್ತಿದ್ದ ಅಬ್ದುಲ್ ಖಾದರ್ ಅಲ್ಲಿಯೇ ಕೊನೆಯುಸಿರೆಳೆದರು. ಕಾರಿನಲ್ಲಿ ಜೊತೆಗಿದ್ದ ದಾದು ಹಾಗೂ ಹಿನಾ ಕೌಸರ್ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಗಾಯಗೊಂಡ ಇಬ್ಬರನ್ನು ರಾಮನಗರ ಆಸ್ಪತ್ರೆಗೆ ಕರೆತರಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ.