ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿದ್ದ ಗಣೇಶ ಪಟಗಾರ ಅವರಿಗೆ ಕುಂಬಾರ ಹುಳ ಕಚ್ಚಿದ್ದು, ಅವರು ಅದೇ ನೋವಿನಲ್ಲಿ ಸಾವನಪ್ಪಿದ್ದಾರೆ.
ಕುಮಟಾದ ಮಾಸೂರಿನಲ್ಲಿ ಗಣೇಶ ಹನುಮಂತ ಪಟಗಾರ (46) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಗಾರೆ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಹೀಗಾಗಿ ಸುತ್ತಲಿನ ಅನೇಕರು ಅವರನ್ನು ಕೆಲಸಕ್ಕೆ ಕರೆಯುತ್ತಿದ್ದರು.
ಡಿಸೆಂಬರ್ 30ರಂದು ಮಂಜುನಾಥ ಗುನಗಾ ಅವರ ಜೊತೆ ಗಣೇಶ ಪಟಗಾರ ಅವರು ಕೆಲಸಕ್ಕೆ ಹೋಗಿದ್ದರು. ಗುಂದದ ರಾಜು ನಾಯ್ಕ ಅವರು ಕಪೌಂಡ್ ಕಟ್ಟುವ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ವೇಳೆ ಕುಂಬಾರ ಹುಳವೊಂದು ದಾಳಿ ಮಾಡಿತು. ಆ ಹುಳ ಗಣೇಶ ಪಟಗಾರ ಅವರ ಕೈ ಹಾಗೂ ತುಟಿಗೆ ಕಚ್ಚಿ ಗಾಯಗೊಳಿಸಿತು.
ಹುಳ ಕಚ್ಚಿದ ನೋವಿಗೆ ಗಣೇಶ ಪಟಗಾರ ಅವರು ಅಲ್ಲಿಯೇ ಕುಸಿದು ಬಿದ್ದರು. ಅವರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನಡೆಯಿತು. ಆದರೆ, ಅದು ಪರಿಣಾಮ ಬೀರಲಿಲ್ಲ. ಗುಡಿಗಾರ ಗಲ್ಲಿಯ ಬಳಿ ಗಣೇಶ ಪಟಗಾರ ಅವರು ಸಾವನಪ್ಪಿದರು. ಅವರ ಅಣ್ಣ ಮಹದೇವ ಪಟಗಾರ ಅವರು ಈ ಬಗ್ಗೆ ಮಾಹಿತಿ ನೀಡಿದರು.