`ಮಾದಕ ವಸ್ತು ಮುಕ್ತ ಭಾರತ’ ಎಂಬ ಸಂದೇಶ ಹೊತ್ತು ಶಿರಸಿಯ ಭಗತಸಿಂಗ್ ಬ್ರಿಗೇಡ್ ಆಂದೋಲನ ನಡೆಸಿದೆ. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ಓಟವನ್ನು ಆಯೋಜಿಸಿದೆ.
ಭಾನುವಾರ ನಡೆದ ಈ ಮ್ಯಾರಥಾನ್’ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿಯ ಬಗ್ಗೆ ಅವರು ಜನರಲ್ಲಿ ಅರಿವು ಮೂಡಿಸಿದ್ದಾರೆ. `ವಿವೇಕಾನಂದರ ತತ್ವ ಆದರ್ಶಗಳನ್ನು ಅನುಸರಿಸಿ ಯುವ ಜನಾಂಗದವರು ಜೀವಿಸಬೇಕು. ಭಾರತೀಯರಾದ ನಾವೆಲ್ಲರೂ ವ್ಯಸನಗಳಿಂದ ದೂರವಿರಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದ್ದಾರೆ. `ಉತ್ತಮ ಆರೋಗ್ಯ ಇದ್ದಾಗ ಮಾತ್ರ ಎಲ್ಲರೂ ಕ್ರಿಯಾಶೀಲರಾಗಲಿರಲು ಸಾಧ್ಯವಿದೆ. ಶಿರಸಿಯನ್ನು ಡ್ರಗ್ಸ್ ಮುಕ್ತ ಪ್ರದೇಶವನ್ನಾಗಿಸಲು ಪ್ರತಿಯೊಬ್ಬರು ಪಣತೊಡಬೇಕಿದೆ’ ಎಂದವರು ಹೇಳಿದರು.
ಮರಾಠಿಕೊಪ್ಪದಿಂದ 7ಕಿಮೀ ಓಟ ಸ್ಪರ್ಧೆ ಶುರುವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 500ಕ್ಕೂ ಅಧಿಕ ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 350 ಸ್ಪರ್ಧಾಳುಗಳು ಕೊನೆಯವರೆಗೂ ಓಡಿ ತಲುಪಿ ಗುರಿ ಸಾಧಿಸಿದರು. ಪುರುಷರ ವಿಭಾಗದಲ್ಲಿ ಸಿದ್ದಾಪುರ ದಿಲೀಪ ನಾಯ್ಕ ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಭವಿಷ್ಯ ಕೆ ಪಿ ಅವರು ಪ್ರಥಮ ಬಹುಮಾನಪಡೆದರು. ಭಗತಸಿಂಗ್ ಬ್ರಿಗೇಡ ಅಧ್ಯಕ್ಷ ಹಾಗೂ ರನ್ ಶಿರಸಿ ರನ್ ಸಂಘಟಕ ಸುಭಾಷ್ ಈಶ್ವರ್ ನಾಯ್ಕ ಬಹುಮಾನ ಘೋಷಿಸಿದರು. ನಗರಸಭೆ ಮಾಜಿ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ನಗರಸಭಾ ಮಾಜಿ ಸದಸ್ಯ ಶ್ರೀಧರ ಮೊಗೇರ, ಪ್ರಮುಖರಾದ ವಿನಾಯಕ ವಸಂತ್ ಶೆಟ್ಟಿ, ರಾಘು ಶೆಟ್ಟಿ, ರವಿ ಗೌಳಿ, ರವಿ ಶೆಟ್ಟಿ ಇತರರು ಇದ್ದರು.