ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆ ಅಂಗವಾಗಿ `ಹೊರ ಮಂಗಳವಾರ’ ಆಚರಣೆ ಸಂಪ್ರದಾಯ ಈ ದಿನ ನಡೆದಿದ್ದು, ಅಧಿಕೃತವಾಗಿ ಜಾತ್ರೆ ಸಂಪ್ರದಾಯ ಶುರುವಾಗಿದೆ.
ಯಲ್ಲಾಪುರ ಜಾತ್ರೆಯ ಪೂರ್ವದ ವಿಶಿಷ್ಠ ಆಚರಣೆಗಳಲ್ಲಿ ಹೊರ ಮಂಗಳವಾರವೂ ಒಂದಾಗಿದ್ದು, ಅದರ ಅಂಗವಾಗಿ ಪಟ್ಟಣದ ಜನ ಮನೆಗೆ ಬೀಗ ಹಾಕಿದ್ದರು. ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟ ಭಕ್ತರು ಸಂಜೆ 5 ಗಂಟೆಗೆ ಮರಳಿದರು. ಈ ಸಮಯದಲ್ಲಿ ದೇವಿಯು ಪ್ರತಿ ಮನೆಗೆ ಸಂಚಾರಕ್ಕೆ ಬರುವ ನಂಬಿಕೆಯಿದ್ದು, ಆ ನಂಬಿಕೆ ಹಿನ್ನಲೆ ಜನ ದೇವಿಗೆ ನೀರು, ಅರಿಶೀನ, ಕುಂಕುಮ ಹೂವನ್ನಿಟ್ಟು ಬಾಗಲು ಮುಚ್ಚಿ ಮನೆಯಿಂದ ಹೊರ ಹೋಗುವುದು ವಾಡಿಕೆ.
ಹಿಂದಿನಿoದಲೂ ಬಂದ ಸಂಪ್ರದಾಯದ ಪ್ರಕಾರ ಕುಟುಂಬದವರು ಮೊದಲೇ ಅಡುಗೆ ಸಿದ್ಧಪಡಿಸಿ, ಅದನ್ನು ಕಟ್ಟಿಕೊಂಡು ಮನೆಯಿಂದ ಹೊರ ಹೋದರು. ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಉದ್ಯಾನವನ, ಜೊಡಕೇರೆ ಬಳಿ ಇರುವ ಪಟ್ಟಣ ಪಂಚಾಯತ ಉದ್ಯಾನವನ ಜನರಿಂದ ತುಂಬಿತ್ತು. ಮಾಗೋಡು, ಸಾತೊಡ್ಡಿ, ಕವಡೀಕೆರೆ, ಜೇನುಕಲ್ಲು ಗುಡ್ಡ, ಚಂದಗುಳಿಯ ಗಂಟೆ ಗಣಪತಿ ದೇವಸ್ಥಾನದ ಬಳಿಯೂ ಸಾಕಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರ ಜಾತ್ರೆ ನಡೆಯಲಿದ್ದು, ಜನವರಿ 27 ಹಾಗೂ ಫೆಬ್ರವರಿ 03ರಂದು ಸಹ ಹೊರ ಮಂಗಳವಾರ ಆಚರಣೆ ನಡೆಯಲಿದೆ.