ಯಲ್ಲಾಪುರದ ದಿನಕರ ಶೆಟ್ಟಿ ಅವರಿಗೆ ನಾಗರಾಜ ನಾಯ್ಕ ಹಾಗೂ ಈಶ್ವರ ನಾಯ್ಕ ಅವರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ. ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದ್ದು, ಚಿಕಿತ್ಸೆಗಾಗಿ ಅವರು ಆಸ್ಪತ್ರೆ ಸೇರಿದ್ದಾರೆ.
ಯಲ್ಲಾಪುರದ ಶಿರನಾಳ ಬಳಿಯ ಅಂಬೇಬೇಣದ ದಿನಕರ ಕೃಷ್ಣ ಶೆಟ್ಟಿ (60) ಅವರು ವಾಸವಾಗಿದ್ದಾರೆ. ಮುಳಕನಜಡ್ಡಿಯ ನಾಗರಾಜ ಈಶ್ವರ ನಾಯ್ಕ (23) ಹಾಗೂ ಪ್ರಶಾಂತ ಈಶ್ವರ ನಾಯ್ಕ (26) ಅವರೊಂದಿಗೆ ದಿನಕರ ಶೆಟ್ಟಿ ಅವರು ವೈಮನಸ್ಸು ಹೊಂದಿದ್ದಾರೆ. ಡಿಸೆಂಬರ್ 31ರ ರಾತ್ರಿ ದಿನಕರ ಶೆಟ್ಟಿ ಅವರು ನಾಗರಾಜ ನಾಯ್ಕ ಅವರಿಗೆ ಒಂಟಿಯಾಗಿ ಸಿಕ್ಕಿದ್ದು, ಈ ವೇಳೆ ಪ್ರಶಾಂತ ನಾಯ್ಕರ ಜೊತೆಗೂಡಿ ಅವರು ದಾಳಿ ನಡೆಸಿದ್ದಾರೆ.
ನಾಗರಾಜ ನಾಯ್ಕ ಅವರು ಮೊದಲು ದಿನಕರ ಶೆಟ್ಟಿ ಅವರಿಗೆ ಕೆಟ್ಟದಾಗಿ ಬೈದಿದ್ದು, ಇದಕ್ಕೆ ದಿನಕರ ಶೆಟ್ಟಿ ಅವರು ತಿರುಗೇಟು ನೀಡಿದ್ದಾರೆ. ಇದರಿಂದ ಸಿಟ್ಟಾದ ನಾಗರಾಜ ನಾಯ್ಕ ಅವರು ಕಲ್ಲು ಬೀಸಿದ್ದಾರೆ. ಪ್ರಶಾಂತ ನಾಯ್ಕ ಅವರು ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಈ ವೇಳೆ ದಿನಕರ ಶೆಟ್ಟಿ ಅವರ ತಲೆಗೆ ಕಲ್ಲು ತಾಗಿದೆ.
ಹಣೆಯಿಂದ ರಕ್ತ ಬಂದ ಕಾರಣ ದಿನಕರ ಶೆಟ್ಟಿ ಅವರು ಆಸ್ಪತ್ರೆ ಕಡೆ ಓಡಿದ್ದಾರೆ. ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ ನಂತರ ಪಿಐ ರಾಜಶೇಖರ ವಂದಲಿ ಅವರನ್ನು ಭೇಟಿ ಆಗಿದ್ದಾರೆ. ತಮ್ಮ ಮೇಲಾದ ಆಕ್ರಮಣದ ಬಗ್ಗೆ ವಿವರಿಸಿ, ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.