ಭಟ್ಕಳದ ಮಾಲಾ ನಾಯಕ ಅವರು ದಾಸ್ತಾನು ಮಾಡಿದ್ದ ಕೆಂಪು ಕಲ್ಲುಗಳನ್ನು ಸರ್ಪನಕಟ್ಟಾದ ಮಹೇಶ ನಾಯ್ಕ ಅವರು ಕದ್ದಿದ್ದಾರೆ. 450 ಕಲ್ಲು ಕಾಣೆಯಾಗಿದ್ದರಿಂದ ಮಾಲಾ ನಾಯಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಭಟ್ಕಳದ ಬೆಳಕೆ ಹಡೀನ್ ಗ್ರಾಮದಲ್ಲಿ ಮಾಲಾ ಮಂಜುನಾಥ ನಾಯಕ ಅವರು ವಾಸವಾಗಿದ್ದಾರೆ. ಸಣ್ಣ ಕೈಗಾರಿಕಾ ಇಲಾಖೆಯಿಂದ ಅವರು ಉದ್ದಿಮೆಗಾಗಿ ಭೂಮಿ ಖರೀದಿಸಿದ್ದು, ಆ ಜಾಗವನ್ನು ಇಲಾಖೆ ಮಂಜೂರಿ ಮಾಡಿದೆ. ಅಲ್ಲಿರುವ ಕಟ್ಟಡ ಹಳೆಯದಾಗಿರುವ ಕಾರಣ ಅದನ್ನು ದುರಸ್ಥಿಗೊಳಿಸಲು ಮಾಲಾ ನಾಯಕ ಅವರು ನಿರ್ಧರಿಸಿದ್ದಾರೆ.
ಅದರ ಪ್ರಕಾರ, ಕಟ್ಟಡದ ದುರಸ್ಥಿಗಾಗಿ ಅವರು ಕೆಂಪು ಕಲ್ಲುಗಳನ್ನು ತರಿಸಿದ್ದಾರೆ. ಎರಡುವರೆ ಲಾರಿಯಷ್ಟು ಕಲ್ಲುಗಳನ್ನು ಅವರು ತಮ್ಮ ಜಾಗದಲ್ಲಿ ಇಳಿಸಿದ್ದಾರೆ. ನಾಲ್ಕು ದಿನದ ಹಿಂದೆ ಆ ಕಲ್ಲಿನ ಮೇಲೆ ಭಟ್ಕಳ ಯ್ಲವಡಿಕುವೂರು ಬಳಿಯ ಸರ್ಪಿನಕಟ್ಟಾದ ಮಹೇಶ ಕೃಷ್ಣಪ್ಪ ನಾಯ್ಕ ಅವರ ಕಣ್ಣು ಬಿದ್ದಿದೆ. ಒಂದುವರೆ ಲೋಡಿನಷ್ಟು ಕಲ್ಲನ್ನು ಅವರು ಅಲ್ಲಿಂದ ಅಪಹರಿಸಿದ್ದಾರೆ.
ಸುಮಾರು 450 ಕಲ್ಲು ಕಾಣೆಯಾದ ಬಗ್ಗೆ ಮಾಲಾ ನಾಯಕ ಅವರು ವಿಚಾರಿಸಿದ್ದು, ಆಗ ಮಹೇಶ ನಾಯ್ಕ ಮಾಡಿದ ಕಿತಾಪತಿ ಗೊತ್ತಾಗಿದೆ. ತಮಗಾದ ನಷ್ಟದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. ಕಲ್ಲು ಕದ್ದವನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.