ಕಾರವಾರದ ಕಾರ್ತಿಕ ಗೌಡ ಹಾಗೂ ಅನುಫ ಮಾಳ್ಸೆಕರ್ ಸೇರಿ ಕಳ್ಳತನ ಶುರು ಮಾಡಿದ್ದಾರೆ. ಕಾಳಿ ನದಿಯ ಖನಿಜವನ್ನು ಅವರು ಕದ್ದು ಸಾಗಿಸುತ್ತಿದ್ದಾರೆ.
ಕಾರವಾರದ ಕಿನ್ನರದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸದಾಶಿವಗಡ ಅರ್ಜುನಕೋಟದ ಕಾರ್ತಿಕ ರವಿ ಗೌಡ ಹಾಗೂ ನಂದನಗದ್ದಾ ತೆಲಂಗ ರಸ್ತೆಯ ಅನುಫ್ ಧನವಂತ ಮಾಳ್ಸೆಕರ್ ಸೇರಿ ಮರಳು ತೆಗೆದಿದ್ದು, ಅದನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಕಾಂಗ್ರೆಸ್ ಪ್ರಮುಖರೊಬ್ಬರು ಬೆನ್ನೆಲುಬಾಗಿದ್ದಾರೆ ಎಂಬ ಆರೋಪವ್ಯಕ್ತವಾಗಿದೆ.
ಶುಕ್ರವಾರ ನಸುಕಿನಲ್ಲಿ ಮೂರು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ನಡೆದಿದ್ದು, ಹುಬ್ಬಳ್ಳಿ ಹಾಗೂ ಗೋವಾಗೆ ಹೋಗುತ್ತಿದ್ದ ಮರಳು ಲಾರಿಯನ್ನು ಆ ಭಾಗದ ಜನರೇ ತಡೆದಿದ್ದಾರೆ. ಅಲ್ಲಿನವರು ನೀಡಿದ ಮಾಹಿತಿ ಪ್ರಕಾರ, ಪ್ರಭಾವಿಯೊಬ್ಬರು ಬಂದು ಎರಡು ಲಾರಿಗಳನ್ನು ಬಿಟ್ಟು ಕಳುಹಿಸಿದ್ದು, ಅದಾದ ನಂತರ ಪೊಲೀಸರು ಒಂದು ಲಾರಿಯನ್ನು ವಶಕ್ಕೆಪಡೆದಿದ್ದಾರೆ. ಸರ್ಕಾರಕ್ಕೆ ತೆರಿಗೆಯನ್ನು ಕಟ್ಟದೇ ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯುವ ಕೆಲಸ ನಡೆದಿಲ್ಲ.
ಬಡ ಜನ ಮನೆ ನಿರ್ಮಾಣಕ್ಕೂ ಮರಳು ಸಿಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಪ್ರಭಾವಿಗಳು ಮರಳನ್ನು ಕದ್ದು ಸಾಗಿಸಿ ಕಾಸು ಮಾಡುತ್ತಿದ್ದಾರೆ. ಕಳೆದ ವರ್ಷ ಅಕ್ರಮ ಮರಳು ಸಾಗಾಟ ನಡೆಯದ ಹಾಗೇ ನದಿ ಪ್ರದೇಶದ ರಸ್ತೆಗಳಿಗೆ ಅಡ್ಡಲಾಗಿ ಕಾಲುವೆ ತೆಗೆದಿದ್ದು, ಈ ವರ್ಷ ಕಾಲುವೆ ತೆಗೆಯುವ ಕೆಲಸವೂ ನಡೆದಿಲ್ಲ.