ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ಲಾರಿಗಳ ಬೆನ್ನು ಬಿದ್ದಿದ್ದಾರೆ. ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಮರಳುಗಾರಿಕೆ ತಡೆಯುವ ಅಧಿಕಾರವಿದ್ದರೂ ಯಲ್ಲಾಪುರದಲ್ಲಿ ಮಾತ್ರ ಈ ವರ್ಷ ಒಂದೂ ಲಾರಿ ಸಿಕ್ಕಿ ಬಿದ್ದಿಲ್ಲ!
ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ನವೀಕರಣ ಕಾರ್ಯ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದಿಂದ ಅಕ್ರಮವಾಗಿ ಬರುವ ಮರಳು ಲಾರಿಗಳು ಹೆದ್ದಾರಿಯನ್ನು ಹದಗೆಡಿಸುತ್ತಿವೆ. ಅತಿಭಾರ ಹೊತ್ತು ಸಾಗುವ ಅಕ್ರಮ ಮರಳುಗಾರಿಕೆ ಲಾರಿಗಳು ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳಿಗೂ ಮಾರಕವಾಗಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮರಳು ಗುಡ್ಡೆಗಳು ಕಾಣಿಸುತ್ತಿವೆ. ಸದ್ಯ ಮರಳುಕಾರಿಕೆಗೆ ಅನುಮತಿ ಇಲ್ಲದ ಕಾರಣ ದಂಧೆಕೋರರಲು ಅಕ್ರಮ ಮರಳುಗಾರಿಕೆಯ ದಾರಿ ಹಿಡಿದಿದ್ದು, ನಸುಕಿನ ನಿದ್ದೆಯಲ್ಲಿರುವ ಅಧಿಕಾರಿಗಳು ಅಕ್ರಮದ ಬಗ್ಗೆ ಅರಿವಿದ್ದರೂ ಅದನ್ನು ಪ್ರಶ್ನಿಸುತ್ತಿಲ್ಲ.
ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ಮಾಡಲಾಗುತ್ತದೆ. ಜನ ಜೀವನಕ್ಕೆ ತೊಂದರೆ ಆಗುವ ರೀತಿ ಆ ಮರಳನ್ನು ಸಾಗಿಸಲಾಗುತ್ತಿದೆ. ಅದಾದ ನಂತರವೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆಗುವ ರೀತಿ ಮರಳು ದಾಸ್ತಾನು ಮಾಡಲಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಅರಿವಿದ್ದರೂ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಆಗುತ್ತಿಲ್ಲ. ಕಾರವಾರ, ಅಂಕೋಲಾ, ಕುಮಟಾ, ಶಿರಸಿ ಸೇರಿ ಬೇರೆ ಬೇರೆ ಪ್ರದೇಶದಲ್ಲಿ ಮರಳು ಲಾರಿಗಳನ್ನು ಪೊಲೀಸರು ತಡೆದಿದ್ದಾರೆ. ಆದರೆ, ರಾಜಾರೋಷವಾಗಿ ಮರಳು ಬಂದರೂ ಯಲ್ಲಾಪುರದಲ್ಲಿ ಅದನ್ನು ಹಿಡಿಯುವವರಿಲ್ಲ. ಯಲ್ಲಾಪುರದ ಕೆಲ ಲಾರಿ ಮಾಲಕರ ಜೊತೆ ಬೇರೆ ಬೇರೆ ಭಾಗದವರು ಸಹ ಈ ದಂಧೆಯಲ್ಲಿ ತೊಡಗಿದ್ದು, ಅಧಿಕಾರಿಗಳ ಹೆಸರು ಹೇಳಿ ಅವರು ದುಡ್ಡು ಮಾಡುತ್ತಿದ್ದಾರೆ.
ಸರಿ ಸುಮಾರು 5 ಸಾವಿರ ರೂ ವೆಚ್ಚದಲ್ಲಿ ಅಕ್ರಮ ಮರಳು ಲಾರಿಗೆ ಭರ್ತಿಯಾಗುತ್ತದೆ. ಚಾಲಕರ ವೇತನ, ಭತ್ಯೆ ಸೇರಿ ಸುಮಾರು 10 ಸಾವಿರ ರೂ ಸಾಗಾಣಿಕಾ ವೆಚ್ಚ ಬರುತ್ತದೆ. ಅದಾಗಿಯೂ ದಂಧೆಕೋರರು 30ರಿಂದ 35 ಸಾವಿರ ರೂ ವಸೂಲಿ ಮಾಡುತ್ತಿದ್ದು, ಪ್ರಶ್ನಿಸಿದರೆ `ಅವರಿಗೆ ಕೊಡಬೇಕು.. ಇವರಿಗೆ ಕೊಡಬೇಕು’ ಎನ್ನುತ್ತಿದ್ದಾರೆ. `ಅಧಿಕಾರಿಗಳಿಗೆ ಕೊಡುವುದಕ್ಕಾಗಿಯೇ ಪ್ರತಿ ತಿಂಗಳು 1.70 ಲಕ್ಷ ರೂ ಖರ್ಚಾಗುತ್ತಿದೆ. 35 ಸಾವಿರ ರೂ ವಸೂಲಿ ಮಾಡಿದರೂ ನಮಗೆ ಏನೂ ಉಳಿಯುತ್ತಿಲ್ಲ’ ಎಂಬುದು ಮರಳು ದಂಧೆಕೋರರು ಗ್ರಾಹಕರ ಬಳಿ ಹೇಳುವ ಮಾತು.
ಅಕ್ರಮ ಮರಳು ಲಾರಿ ಸಾಗಾಟದಿಂದ ರಸ್ತೆ ಹಾಳಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ಎಲ್ಲಡೆ ರಸ್ತೆ ಮೇಲೆ ರಾಶಿ ರಾಶಿ ಮರಳು ಬಿದ್ದರೂ ಅದರ ವಿರುದ್ಧ ಕ್ರಮಜರುಗಿಸುವವರಿಲ್ಲ ಎಂದು ಅಸಮಧಾನವ್ಯಕ್ತಪಡಿಸುತ್ತಿದ್ದಾರೆ. ಅಪಘಾತಕ್ಕೆ ಆಹ್ವಾನ ನೀಡುವ ಹಾಗೇ ಮರಳು ಲಾರಿಗಳು ಸಂಚರಿಸುತ್ತಿದ್ದರೂ ಅದನ್ನು ತಡೆಯುವ ಧೈರ್ಯ ಯಾರಿಗೂ ಇಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಹೆಸರು ಹೇಳಿ ಗಣಿದಣಿಗಳು ದುಡ್ಡು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.