ಗ್ರಾಮದೇವಿ ಜಾತ್ರೆ ಹಿನ್ನಲೆ ಯಲ್ಲಾಪುರ ಪಟ್ಟಣ ಪಂಚಾಯತಗೆ ಒಂದೇ ದಿನ ಲಕ್ಷಾಂತರ ರೂ ಆದಾಯ ಬಂದಿದೆ.
ಯಲ್ಲಾಪುರ ಪಟ್ಟಣ ಪಂಚಾಯತದಿoದ ಪಟ್ಟಣದ ಬೀದಿ ಬೀದಿಗಳಲ್ಲಿನ ಜಾಗವನ್ನು ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕಾಗಿ ಹರಾಜು ಹಾಕಲಾಗಿದ್ದು, 200ಕ್ಕೂ ಅಧಿಕ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ. 30 ಸಾವಿರ ರೂಪಾಯಿಯಿಂದ 1 ಲಕ್ಷ ರೂ ಆಸುಪಾಸಿನವರೆಗೆ ಹರಾಜು ಕೂಗಿ ಜಾತ್ರಾ ಅವಧಿಯ ವ್ಯಾಪಾರಕ್ಕೆ ಜಾಗ ಕಾಯ್ದಿರಿಸಿಕೊಂಡಿದ್ದಾರೆ.
ಬೆಳಗ್ಗೆ 11ಗಂಟೆಯಿoದ ಸಂಜೆ 4ಗಂಟೆಯವರೆಗೂ ಜಾಗಗಳ ಹರಾಜು ಪ್ರಕ್ರಿಯೆ ನಡೆದಿದ್ದು, ತೀವೃ ಪೈಪೋಟಿ ಹಿನ್ನಲೆ ಮುಕ್ತಾಯದ ಸಮಯಕ್ಕೆ 19 ಪ್ಲಾಟುಗಳು ಮಾತ್ರ ಹರಾಜು ಆಗಿವೆ. ಪಟ್ಟಣ ಪಂಚಾಯತದಿoದ ಒಟ್ಟು 122 ಪ್ಲಾಟುಗಳಿಗಾಗಿ ಜಾಗ ಮೀಸಲಿರಿಸಿದ್ದು, ಇನ್ನೂ ನಾಲ್ಕು ದಿನ ಹರಾಜಿಗೆ ಸಮಯ ಬೇಕಾಗಬಹುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯತ ರಸ್ತೆಯ ತಿರುವಿನಲ್ಲಿ 10*10 ಗಾತ್ರದ ಜಾಗವನ್ನು ಪಟ್ಟಣ ಪಂಚಾಯತವೂ 14 ಸಾವಿರ ರೂಪಾಯಿಯ ಬೆಲೆ ನಿಗದಿ ಮಾಡಿತ್ತು. ಕಳೆದ ಜಾತ್ರೆಯಲ್ಲಿ 5 ಸಾವಿರ ರೂ ಬೆಲೆಗೆ ಹರಾಜುಕೂಗಲಾಗಿದ್ದು,, ಈ ಬಾರಿ ಸರ್ಕಾರವೇ 14 ಸಾವಿರ ರೂ ನಿಗದಿ ಮಾಡಿದಕ್ಕೆ ಹರಾಜಿಗೆ ಬಂದವರು ಆಕ್ಷೇಪವ್ಯಕ್ತಪಡಿಸಿದರು. ಶೇ 18ರ ಜಿಎಸ್ಟಿ ಪ್ರತ್ಯೇಕವಾಗಿ ಪಾವತಿಸುವ ಬಗ್ಗೆಯೂ ತಕರಾರು ಸಲ್ಲಿಸಿದರು. ಆದರೆ, ಅದೇ ಪ್ಲಾಟು ಕೊನೆಗೆ 28 ಸಾವಿರ ರೂಪಾಯಿಯವರೆಗೆ ಕೂಗಲ್ಪಟ್ಟಿದ್ದು, ನಂತರದ ಪ್ಲಾಟುಗಳು ಸಹ 30 ಸಾವಿರ ಮೇಲ್ಪಟ್ಟು ಆದಾಯ ತಂದುಕೊಟ್ಟವು.
ಪೊಲೀಸ್ ಠಾಣೆ ಹಾಗೂ ಹೆದ್ದಾರಿ ತಿರುವಿನ ಜಾಗದಲ್ಲಿದ್ದ 12*10 ಗಾತ್ರದ ಪ್ಲಾಟು 1 ಲಕ್ಷದ ಸಮೀಪಕ್ಕೆ ಹೋಗಿದ್ದು, ಅದಾದ ನಂತರದ ಅನೇಕ ಪ್ಲಾಟುಗಳನ್ನು ಜನ ಪೈಪೋಟಿಗೆ ಬಿದ್ದು ಹರಾಜು ಕೂಗಿದರು. ಸಣ್ಣಪುಟ್ಟ ವ್ಯಾಪಾರಸ್ಥರು ಹರಾಜಿನಲ್ಲಿ ಭಾಗವಹಿಸಿದರಾದರೂ ಆ ದರಕ್ಕೆ ಭೂಮಿ ಬಾಡಿಗೆ ಪಾವತಿಸಲಾಗದೇ ಮೌನವಾಗಿದ್ದರು. ಈ ನಡುವೆ ಕೆಲ ಸಂಘಟನೆಯವರು `ಪ್ರತಿ ಜಾತ್ರೆಯಂತೆ ತಮಗೂ ಕೆಲ ಪ್ಲಾಟುಗಳನ್ನು ಮೀಸಲಿರಿಸಬೇಕು’ ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.
`ಈ ಬಾರಿ ಶಿರಸಿ, ಸಾಗರ ಎಲ್ಲಾ ಕಡೆ ಜಾತ್ರೆಯಿದೆ. ಹೀಗಾಗಿ ದುಬಾರಿ ಬಾಡಿಗೆ ನೀಡಿ ಪ್ಲಾಟು ಪಡೆದರೂ ವ್ಯಾಪಾರ ಕಷ್ಟ’ ಎಂದು ಕೆಲವರು ಹರಾಜಿನಿಂದ ಹಿಂದೆ ಸರಿದರು. ಆದರೆ, ಪೈಪೋಟಿಗೆ ಬಿದ್ದ ಕೆಲವರು ಪಟ್ಟುಹಿಡಿದು ಹರಾಜು ಕೂಗಿ ಸರ್ಕಾರಿ ಬೊಕ್ಕಸ ತುಂಬಿಸಿದರು. ಪೂರ್ವ ನಿಗದಿಯಾದಂತೆ ಮುಂದಿನ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ದಿನದಲ್ಲಿಯೂ ಲಕ್ಷಾಂತರ ರೂ ಸರ್ಕಾರಿ ಬೊಕ್ಕಸಕ್ಕೆ ಬರುವ ಸಾಧ್ಯತೆಗಳಿವೆ.