ಶಿರಸಿ ಅಂಬಾಗಿರಿಯ ವಿನೋದ ಗಡ್ಕರ್ ಹಾಗೂ ಬೆಂಗಳೂರಿನ ನಟರಾಜ ವೇಣುಗೋಪಾಲ ಅವರು ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟಕ್ಕೆ ಅವರ ಜೊತೆ ಮತ್ತಿಬ್ಬರು ಕೈ ಜೋಡಿಸಿದ್ದಾರೆ.
ಫೆಬ್ರವರಿ 6ರ ಮಧ್ಯಾಹ್ನ ಶಿರಸಿ ರಾಜೀವ ನಗರದ ರಸ್ತೆ ಮೇಲೆ ಈ ಹೊಡೆದಾಟ ನಡೆದಿದೆ. ಬೆಂಗಳೂರು ಅಕ್ಷಯನಗರದ ಕಟ್ಟಡ ನಿರ್ಮಾಣಕಾರ ನಟರಾಜ ವೇಣುಗೋಪಾಲ ಹಾಗೂ ಶಿರಸಿ ಅಂಬಾಗಿರಿಯ ವ್ಯಾಪಾರಿ ವಿನೋದ ರಮೇಶ ಗಡ್ಕರ ಅವರು ತಮ್ಮ ತಮ್ಮ ಸಹಾಯಕರ ಜೊತೆ ಆಗಮಿಸಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅವರು ಯಾವ ವಿಷಯಕ್ಕೆ ಜಗಳ ಮಾಡಿದರು? ಯಾವ ಕಾರಣಕ್ಕಾಗಿ ಹೊಡೆದಾಟ ನಡೆಸಿದರು? ಎಂಬುದು ಯಾರಿಗೂ ಗೊತ್ತಾಗಿಲ್ಲ.
ರಾಜೀವ ನಗರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಸಿಬ್ಬಂದಿ ಹನುಮಂತ ಮಕಾಪುರ ಅವರಿಗೆ ಮೊದಲು ಫೋನ್ ಬಂದಿದೆ. ಹನುಮಂತ ಮಕಾಪುರ ಅವರು ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಗೀತಾ ಗರಗ ಅವರನ್ನು ಕರೆದುಕೊಂಡು ಆ ಸ್ಥಳಕ್ಕೆ ಹೋಗಿದ್ದಾರೆ. ಆಗ ಅಲ್ಲಿ ಎರಡು ತಂಡದವರು ಹೊಡೆದಾಟ ನಡೆಸುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ಆ ಹೊಡೆದಾಟ ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಎರಡೂ ತಂಡದವರು ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿ ಶಾಂತಿಗೆ ಭಂಗ ತಂದಿರುವುದಕ್ಕಾಗಿ ಪೊಲೀಸರು ಅವರಿಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ. ಅವರಿಬ್ಬರ ಜೊತೆ ಬಂದಿದ್ದ ಮತ್ತಿಬ್ಬರ ಹೆಸರು ಗೊತ್ತಾಗದಿದ್ದರೂ ಅವರನ್ನು ಸೇರಿಸಿ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.